ಮಂಡ್ಯ: ತಾಲೂಕಿನ ತೂಬಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಿಗದಿಯಾಗಿದ್ದ 14ನೇ ಹಣಕಾಸು ಯೋಜನೆಯ ಸಾಮಾನ್ಯ ಸಭೆಯಿಂದ ಅಧ್ಯಕ್ಷ ವೈ.ಬಿ.ಅಶೋಕ್ಗೌಡ ಪಟೇಲ್ ಹೊರಟು ಹೋಗಿದ್ದನ್ನು ಖಂಡಿಸಿ ಸದಸ್ಯರು ಪ್ರತಿಭಟಿಸಿದರು.
ಗ್ರಾಮ ಪಂಚಾಯಿತಿಯಲ್ಲಿ 19 ಸದಸ್ಯರಿದ್ದು, ಸಭೆಗೆ 12 ಸದಸ್ಯರು ಹಾಜರಿದ್ದರು. ಆದರೆ, ಕೋರಂ ಇದ್ದರೂ ಸಭೆ ನಡೆಸದ ಅಧ್ಯಕ್ಷರು, ಸಭೆಯಿಂದ ಹೊರ ಹೋಗಿರುವುದು ಸರಿಯಲ್ಲ ಎಂದು ಆರೋಪಿಸಿ ಸದಸ್ಯರು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಆಡಳಿತದ ವೈಫಲ್ಯದ ಬಗ್ಗೆ ಮತ್ತು 14ನೇ ಹಣಕಾಸು ಯೋಜನೆಗೆ ಅಂದಾಜು ವೆಚ್ಚ ಮತ್ತು ಆಡಳಿತಾತ್ಮಕ ಅನುಮೋದನೆಯ ಬಗ್ಗೆ ಅಧ್ಯಕ್ಷರು ನಿರ್ಲಕ್ಷೃ ವಹಿಸುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಯನ್ನು ಆಲಿಸುತ್ತಿಲ್ಲ. ಪರಿಣಾಮ ಕಡತಗಳ ವಿಲೇವಾರಿಯಾಗದೆ ಸಮಸ್ಯೆಯಾಗುತ್ತಿದೆ. ಅಧ್ಯಕ್ಷರಾದ ಬಳಿಕ ಒಂದು ಸಭೆಯನ್ನಷ್ಟೇ ಮಾಡಲಾಗಿದೆ. ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದ್ದಾರೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ನಾಗರಾಜು, ಜೈಶಂಕರ್, ರಾಮಣ್ಣ, ಪ್ರಭಾಕರ್, ಅರ್ಜುನ್, ವಿಷಕಂಠ, ಭಾಗ್ಯಮ್ಮ, ಕಲ್ಪನಾ, ವಸಂತಮ್ಮ, ಎಸ್.ಎಲ್.ಅಶ್ವಿನಿ, ನೇತ್ರಾವತಿ, ಕವಿತಾ, ಜಯಪ್ರಕಾಶ್ ಇತರರಿದ್ದರು.