ಬೆಂಗಳೂರು: ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶಾದ್ಯಂತ ಸಂಚರಿಸಿ, ದೇಶವನ್ನು ಒಗ್ಗೂಡಿಸುವ ಮಹತ್ತರ ಕಾರ್ಯ ಮಾಡಿದರು. ಅವರಿಂದ ಪ್ರೇರಿತರಾಗಿರುವ ಗುಜರಾತಿನ ಸೂರತ್ ನಿವಾಸಿ ಜೀತ್ ಮಕ್ವಾನ, ಭಾರತದ ಯಾತ್ರೆ ಕೈಗೊಂಡಿದ್ದಾರೆ. ತಮ್ಮ ಬೈಕ್ ಮೇಲೆ 15 ರಾಜ್ಯಗಳ 15 ಮುಖ್ಯ ನಗರಗಳಿಗೆ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವ ‘ರೈಡ್ ಫಾರ್ ಯೂನಿಟಿ’ ಆರಂಭಿಸಿದ್ದಾರೆ.
ತಮ್ಮ ಈ ಏಕತಾ ಯಾತ್ರೆಯ ಅಂಗವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬಂದಿರುವ ಮಕ್ವಾನ, ವಿಜಯವಾಣಿಯೊಂದಿಗೆ ತಮ್ಮ ಆಶಯಗಳನ್ನು ಹಂಚಿಕೊಂಡಿದ್ದಾರೆ. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸರ್ದಾರ್ ಪಟೇಲರು ನಮ್ಮ ದೇಶವನ್ನು ಒಗ್ಗೂಡಿಸಿದ ಸವಿನೆನಪು ಮತ್ತು ಸದ್ಭಾವವನ್ನು ಬಿತ್ತರಿಸುವುದು ನನ್ನ ಉದ್ದೇಶ. ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ. ಅದನ್ನು ಬಿಂಬಿಸುವ ಪ್ರಯತ್ನ ನನ್ನದು ಎಂದಿದ್ದಾರೆ.
ಇದನ್ನೂ ಓದಿ: ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ’ ಎಂದ ಮಾಜಿ ಸಿಎಂ
ಗುಜರಾತಿನ ಕೇವಡಿಯಾದಲ್ಲಿರುವ ‘ಸ್ಟಾಚ್ಯೂ ಆಫ್ ಯೂನಿಟಿ’ಯಿಂದ ಸೆಪ್ಟೆಂಬರ್ 24ಕ್ಕೆ ಪ್ರಯಾಣ ಆರಂಭಿಸಿದ ಜೀತ್ ಮಕ್ವಾನ, ಈವರೆಗೆ 11 ಪ್ರಮುಖ ನಗರಗಳಿಗೆ ಭೇಟಿ ನೀಡಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಭೇಟಿ ಮಾಡಿ ತಮ್ಮ ಲಾಗ್ ಬುಕ್ನಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಐಟಿ ಕ್ಷೇತ್ರದ ಉದ್ಯೋಗಿಗಳೊಂದಿಗೆ ಒಡನಾಟ ನಡೆಸಿ ಇಂದು ಸಂಜೆಯ ನಂತರ ಕನ್ಯಾಕುಮಾರಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಒಟ್ಟು 10 ರಿಂದ 11 ಸಾವಿರ ಕಿಲೋಮೀಟರ್ಗಳ ಪ್ರಯಾಣದ ಯೋಜನೆ ಇದ್ದು, ಈಗಾಗಲೇ 6500 ಕಿಲೋಮೀಟರ್ನಷ್ಟು ದೂರವನ್ನು ಅವರು ಕ್ರಮಿಸಿದ್ದಾರೆ. ಲಢಾಕಿನ ಲೇಹ್ ಪ್ರಾಂತ್ಯದಲ್ಲಿರುವ ವಾಹನಸಂಚಾರಕ್ಕೆ ಯೋಗ್ಯವಾದ ಜಗತ್ತಿನ ಅತ್ಯಂತ ಎತ್ತರದ ಮಾರ್ಗ ಖಾದುಂಗ್ಲಾಕ್ಕೂ ಮಕ್ವಾನ ಭೇಟಿ ನೀಡಿದ್ದಾರೆ. ಇದೀಗ ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿರುವ ಅವರು, ಮುಂದೆ ಕನ್ಯಾಕುಮಾರಿಗೆ ತೆರಳಲಿದ್ದಾರೆ. ಅಕ್ಟೋಬರ್ 31ಕ್ಕೆ ಮತ್ತೆ ‘ಸ್ಟಾಚ್ಯೂ ಆಫ್ ಯೂನಿಟಿ’ ಇರುವ ಕೇವಡಿಯಾ ತಲುಪುವ ಯೋಜನೆ ಇದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಸರ್ದಾರ್ ಪಟೇಲ್ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: 100 ದೇಶಗಳಿಗೆ ಮಾದರಿಯಾದ ಕೋವಿನ್! ಲಸಿಕೆ ಸಾಧನೆಯಲ್ಲಿ ಈ ಆ್ಯಪ್ನ ಪಾತ್ರ ಮಹತ್ತರ
ಎಂಟೆಕ್ ಮಾಡಿ ಸ್ಟ್ರಕ್ಷರಲ್ ಇಂಜಿನಿಯರಿಂಗ್ನಲ್ಲಿ ಪಿಎಚ್ಡಿ ಮಾಡುತ್ತಿರುವ 25 ವರ್ಷ ವಯಸ್ಸಿನ ಜೀತ್ ಮಕ್ವಾನ, ಸೂರತ್ನ ಭಗವಾನ್ ಮಹಾವೀರ್ ಯೂನಿವರ್ಸಿಟಿಯಲ್ಲಿ ಸಹಾಯಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಯಾತ್ರೆಯ ಮತ್ತೊಂದು ವಿಶೇಷವೆಂದರೆ ಅವರು ಭೇಟಿ ನೀಡುತ್ತಿರುವ ಪ್ರಮುಖ ನಗರಗಳು ಮತ್ತು ಈಗಾಗಲೇ ಸಂಚರಿಸಿರುವ 50 ಕ್ಕೂ ಹೆಚ್ಚು ಊರುಗಳ ಮಣ್ಣನ್ನು ಅವರು ಒಂದು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸುತ್ತಿದ್ದಾರೆ. ತಮ್ಮ ಪಯಣ ಮುಗಿದ ಮೇಲೆ ಈ ಮಣ್ಣಿನಿಂದ ಭಾರತಮಾತೆಯ ಮೂರ್ತಿಯನ್ನು ನಿರ್ಮಿಸುವ ಆಸೆ ಹೊಂದಿದ್ದಾರೆ.
ಮುಂದುವರೆದ ಡ್ರಗ್ಸ್ ಕೇಸ್ ತನಿಖೆ… ಯುವ ನಟಿಗೆ ಎನ್ಸಿಬಿ ಸಮನ್ಸ್!
ಕರೊನಾ ಲಸಿಕಾ ಅಭಿಯಾನದಲ್ಲಿ ಸೆಂಚುರಿ ಬಾರಿಸಿದ ಭಾರತ! 100 ಕೋಟಿ ಡೋಸ್ ನೀಡಿದ ಜಗತ್ತಿನ 2ನೇ ದೇಶ