ಜೈಪುರ: ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಘಟನೆಯೂ ರಾವತ್ ನಗರದ ಮಾತಾ ಕಾ ತನ್ ಎಂಬ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯೂ ಕೊಲೆ ಮಾಡಿದ ನಂತರ ಶವದ ಜೊತೆ ರಾತ್ರಿಯಿಡಿ ಕಳೆದಿದ್ದಾನೆ.
ಮೃತರನ್ನು ಸುಮನ್ ಬೆನಿವಾಲ್ ಎಂದು ಗುರುತಿಸಲಾಗಿದ್ದು, ಈಕೆಯ ಪತಿ ರಮೇಶ್ ಬೆನಿವಾಲ್ನನ್ನು(35) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನಲೆ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೂರ್ವ ಡಿಸಿಪಿ ಅಮ್ರಿತಾ ದುಹಾನ್ ರಮೇಶ್ ಹಾಗೂ ಸುಮನ್ ಜೋಡಿಗೆ 15 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಯ ಮಕ್ಕಳಿಬ್ಬರನ್ನು ಹಾಸ್ಟೆಲ್ನಲ್ಲಿ ಬಿಡಲಾಗಿತ್ತು. ಶನಿವಾರ ರಮೇಶ್ ಹಾಗೂ ಸುಮನ್ ನಡುವೆ ಉಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಗಲಾಟೆಯಾಗಿದೆ.
ಇದನ್ನೂ ಓದಿ: ವರುಣನ ಆರ್ಭಟಕ್ಕೆ ತತ್ತರಿಸಿದ ಗುಜರಾತ್; ಪ್ರವಾಹದಲ್ಲಿ ಕೊಚ್ಚಿಹೋದ ವಾಹನ, ಜಾನುವಾರುಗಳು
ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರಮೇಶ್ ಸುಮನ್ ತಲೆಗೆ ಕಲ್ಲಿನಿಂದ ಹೊಡೆದಿದ್ದು, ಬಳಿಕ ಆಕೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಈ ವಿಚಾರವನ್ನು ಪತ್ನಿಯ ಸಹೋದರನಿಗೆ ಕರೆ ಮಾಡಿ ತಿಳಿಸಿ ಶವದ ಜೊತೆ ರಾತ್ರಿಯಿಡಿ ಕಳೆದಿದ್ದಾನೆ.
ಸಹೋದರಿಯನ್ನು ಕೊಂದ ವಿಚಾರ ತಿಳಿದ ಆಕೆಯ ಸಹೋದರ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ಧಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿ ಹಾಗೂ ಕೊಲೆ ಮಾಡಿದ ಆಯುಧವನ್ನು ವಶಕ್ಕೆ ಪಡೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೂರ್ವ ಡಿಸಿಪಿ ಅಮ್ರಿತಾ ದುಹಾನ್ ತಿಳಿಸಿದ್ದಾರೆ.