ಅಹಮದಾಬಾದ್: ಉತ್ತರ ಭಾರತದ ಹಲವು ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ವರುಣ ಅಬ್ಬರಿಸಿ ಆರ್ಭಟಿಸುತ್ತಿದ್ದು, ಪ್ರವಾಹದಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದೀಗ ಗುಜರಾತಿನಾದ್ಯಂತ ಮಳೆ ಜೋರಾಗಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಗುಜರಾತಿನ ಜುನಾಗಢ್ ಎಂಬ ಪ್ರದೇಶದಲ್ಲಿ ಹೆಚ್ಚಾಗಿ ಮಳೆ ಸುರಿದಿದ್ದು ಕಳೆದ 24 ಘಂಟೆಗಳಲ್ಲಿ 241 ಮಿಮೀ. ದಾಖಲಾಗಿದೆ. ಈ ಮೂಲಕ ಮಳೆಯಿಂದಾಗಿ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ.
ನಗರದಲ್ಲಿ ಕಳೆದ 24 ಘಂಟೆಗಳಲ್ಲಿ ಮಳೆ ಸುರಿದ ಪರಿಣಾಮ ವಾಹನಗಳು ಹಾಗೂ ಜಾನುವಾರುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಮತ್ತೊಂದೆಡೆ ಕಾರುಗಳು ಒಂದರ ಮೇಲೊಂದು ರಾಶೀ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಆನ್ಲೈನ್ ಗ್ಯಾಂಬ್ಲಿಂಗ್ನಲ್ಲಿ 58 ಕೋಟಿ ರೂ. ಕಳೆದುಕೊಂಡ ಉದ್ಯಮಿ
ಪ್ರವಾಹದಿಂದಾಗಿ ಗುಜರಾತಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ, 10 ರಾಜ್ಯ ಹೆದ್ದಾರಿ, 300 ಗ್ರಾಮೀಣ ರಸ್ತೆಗಳನ್ನು ಮುಚ್ಚಲಾಗಿದೆ. ನೀರು ಕಡಿಮೆಯಾದ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ಪುನರಾಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ್ದ ಮೂರು ಸಾವಿರಕ್ಕೂ ಹೆಚ್ಚಿನ ಮಂದಿಯನ್ನು NDRF ಹಾಗೂ SDRF ಸಿಬ್ಬಂದಿ ರಕ್ಷಿಸಿ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಿದ್ದಾರೆ.