ನಾಗ್ಪುರ: ನಾವು ಪ್ರತಿನಿತ್ಯ ಸೈಬರ್ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.
ಇದೀಗ ಪ್ರಕರಣ ಒಂದರಲ್ಲಿ ಉದ್ಯಮಿಯೊಬ್ಬರು ಆನ್ಲೈನ್ ಗ್ಯಾಂಬ್ಲಿಂಗ್ ಗೀಳಿಗೆ ಬಿದ್ದು 58 ಕೋಟಿ ರೂಪಾಯಿ ಹಣ, ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಕಿಂಗ್ಪಿನ್ ಅನಂತ್ ಅಲಿಯಾಸ್ ಸೊಂತು ನವರತನ್ ಜೈನ ಎಂಬುವವನ ವಿರುದ್ದ ಉದ್ಯಮಿ ದೂರು ನೀಡಿದ್ದು, ಈತ ಘಟನೆ ಬೆಳಕಿಗೆ ಬರುತ್ತಿದ್ದಂತೆ ದುಬೈಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಂಬ್ಲಿಂಗ್ ಆಡುವಂತೆ ದುಂಬಾಲು
ಈ ಕುರಿತು ಪ್ರತಿಕ್ರಿಯಿಸಿರುವ ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಮೇಲ್ನೋಟಕ್ಕೆ ನೋಡುವುದಾದರೆ ಪ್ರಕರಣದ ಕಿಂಗ್ಪಿನ್ ಅನಂತ್ ಉದ್ಯಮಿಯೊಬ್ಬರಿಗೆ ಆನ್ಲೈನ್ ಗ್ಯಾಂಬ್ಲಿಂಗ್ ಲಾಭದಾಯಕವಾಗಿದ್ದು ಇದರಲ್ಲಿ ಒಮ್ಮೆ ಹೂಡಿಕೆ ಮಾಡಿ ಆಡುವಂತೆ ಹೇಳಿದ್ದಾನೆ. ಬಳಿಕ 8 ಲಕ್ಷ ರೂಪಾಯಿ ಹಣ ಪಡೆದು ವಾಟ್ಸ್ಅಪ್ನಲ್ಲಿ ಲಿಂಕ್ ಒಂದನ್ನು ಕಳುಹಿಸಿದ್ದಾನೆ.
ಇದನ್ನೂ ಓದಿ: ಹಾರ್ನ್ ಮಾಡಿದ್ದಕ್ಕೆ ಆಟೋ ಚಾಲಕನ ಹತ್ಯೆ
ಲಿಂಕ್ ಓಪನ್ ಮಾಡಿದ ಬಳಿಕ ಆನ್ಲೈನ್ ಗ್ಯಾಂಬ್ಲಿಂಗ್ ಅಕೌಂಟ್ನಲ್ಲಿ 8 ಲಕ್ಷ ರೂಪಾಯಿ ಜಮೆಯಾಗಿರುವುದಾಗಿ ತೋರಿಸಿದೆ. ಬಳಿಕ ಉದ್ಯಮಿ ಗೇಮ್ ಆಡಲು ಶುರು ಮಾಡಿದ್ದು, 5 ಕೋಟಿ ರೂಪಾಯಿ ಹಣವನ್ನು ಗೆದ್ದಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ 58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ದುಬೈಗೆ ಪರಾರಿ
ಈ ಬಗ್ಗೆ ಆರೋಪಿ ಜೈನ್ಗೆ ವಿಚಾರಿಸಿ ತನ್ನ ಹಣವನ್ನು ಹಿಂತಿರುಗಿಸುವಂತೆ ಉದ್ಯಮಿ ಕೇಳಿದಾಗ ಆತ ನಿರಾಕರಿಸಿದ್ದಾನೆ. ಇದರಿಂದ ಅನುಮಾನಗೊಂಡ ಉದ್ಯಮಿಯೂ ಪೊಲೀಸರಿಗೆ ದೂರು ದಾಖಲಿಸಿ ತಮಗಾದ ಬಗ್ಗೆ ಹೇಳಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆರೋಪಿ ಅನಂತ್ ಮನೆ ಮೇಲೆ ದಾಳಿ ಮಾಡಿ ಕೋಟಿಗಟ್ಟಲ್ಲೇ ಹಣ, 4 ಕೆಜಿ ಚಿನ್ನದ ಬಿಸ್ಕೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ದುಬೈಗೆ ಪರಾರಿಯಾಗಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತಿಳಿಸಿದ್ದಾರೆ. ‘