ಬೆಂಗಳೂರು: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಾಡಪ್ರಭು ಕೆಂಪೇಗೌಡ ಪಾರಂಪರಿಕ ಕಾರಿಡಾರ್ ರೂಪಿಸುವ ನಿಟ್ಟಿನಲ್ಲಿ ವಲಯ ಆಯುಕ್ತ ಜಯರಾಮ್ ರಾಯಪುರ ಭಾನುವಾರ ಪ್ರದಕ್ಷಿಣೆ ನಡೆಸಿದರು.
ಲಾಲ್ಬಾಗ್ ಪಶ್ಚಿಮ ದ್ವಾರದಿಂದ ಕಾಲ್ನುಡಿಗೆ ಮೂಲಕ ತೆರಳಿದ ಅವರು, ಲಾಲ್ಬಾಗ್ ಆವರಣ, ಗಡಿ ಗೋಪುರ, ಸಿದ್ಧಾಪುರ ಗೇಟ್, ಆಶೋಕ ಪಿಲ್ಲರ್ ವೃತ್ತ, ಕನಕನ ಪಾಳ್ಯ ಮುಖ್ಯ ರಸ್ತೆ, ಎಂ.ಎನ್. ಕೃಷ್ಣಾರಾವ್ ಪಾರ್ಕ್, ಗಾಂಧಿ ಬಜಾರ್, ದೊಡ್ಡ ಬಸವಣ್ಣ ದೇವಸ್ಥಾನ, ರಾಮಾಂಜನೇಯ ಗುಡ್ಡ ದೇವಸ್ಥಾನ, ಗವಿಗಂಗಾಧರೇಶ್ವರ ದೇವಸ್ಥಾನ, ಕೆಂಪಾಂಬುದಿ ಕೆರೆ ಬಳಿಯ ಗಡಿ ಗೋಪುರ, ರಾಮಕೃಷ್ಣ ಆಶ್ರಮ, ನ್ಯಾಷನಲ್ ಕಾಲೇಜು, ಮಕ್ಕಳಕೂಟ ಮೂಲಕ ಸಾಗಿ ಟಿಪ್ಪು ಬೇಸಿಗೆ ಅರಮನೆ, ಬೆಂಗಳೂರು ಕೋಟೆ, ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಸಜ್ಜನ್ರಾವ್ ವೃತ್ತ, ವಿಶ್ವೇಶ್ವರಪುರ ಫುಡ್ ಸ್ಟ್ರೀಟ್ ಸೇರಿ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಕೊರಿಯಾ ಓಪನ್ 2023; ಭಾರತದ ಚಿರಾಗ್-ಸಾತ್ವಿಕ್ ಚಾಂಪಿಯನ್
ಲಾಲ್ಬಾಗ್ ಗಡಿ ಗೋಪುರ ಹಾಗೂ ಕೆಂಪಾಂಬುಧಿ ಕೆರೆ ಗಡಿ ಗೋಪುರಗಳ ನಡುವಿನ 12 ಕಿ.ಮೀ ಪ್ರದೇಶದಲ್ಲಿ ಕೆಂಪೇಗೌಡ ಪಾರಂಪರಿಕ ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದನ್ನು ಯಾವ ಮಾದರಿಯಲ್ಲಿ ರೂಪಿಸಬೇಕು, ಏನೇನು ಕ್ರಮಕೈಗೊಳ್ಳಬೇಕು ಎಂಬಿತ್ಯಾದಿ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ.
ಕಾರಿಡಾರ್ ರೂಪಿಸುವ ಮಾರ್ಗ, ತಂಗುದಾಣ ನಿರ್ಮಾಣ, ಪಾರಂಪರಿಕ ಸ್ಥಳಗಳ ಹಾಗೂ ವಾಹನ ನಿಲುಗಡೆ ಸ್ಥಳಗಳನ್ನು ಗುರುತಿಸಲಾಗಿದೆ. ಕಾರಿಡಾರ್ ರೂಪಿಸುವ ಸಲುವಾಗಿ ನುರಿತ ತಜ್ಞರ, ನಾಗರಿಕರ ಸಲಹೆ ಪಡೆದು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಸಿದ್ದಪಡಿಸಿದ ಬಳಿಕ ಶೀಘ್ರ ಕಾರಿಡಾರ್ ಅನುಷ್ಠಾನಗೊಳಿಸುವುದಾಗಿ ಜಯರಾಮ್ ರಾಯಪುರ ಹೇಳಿದರು. ವಲಯ ಮುಖ್ಯ ಅಭಿಯಂತರ ರಾಜೇಶ್ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.