ಕೊಡಗು: ಒಬ್ಬೊಬ್ಬರು ಒಂದೊಂದು ರೀತಿಯ ಸಾಹಸವನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬರು ಭಕ್ತರು ಸಾಹಸ ಮೆರೆದಿದ್ದು, ಈಡುಗಾಯಿಗೆ ಇಟ್ಟಿದ್ದ 12,008 ತೆಂಗಿನಕಾಯಿಗಳನ್ನು ಒಬ್ಬರೇ ಒಡೆದುಹಾಕಿದ್ದಾರೆ. ಕೇರಳದಲ್ಲಿ ಈ ಸಾಹಸ ನಡೆದಿದೆ.
ಕೇರಳದ ಉಳ್ಳಿಕಲ್ನಲ್ಲಿ ನಡೆಯುತ್ತಿರುವ ಬೈತೂರು ಉತ್ಸವದಲ್ಲಿ ಕೊಡಗಿನ ಭಕ್ತಾದಿಗಳಿಂದ ಸಂಗ್ರಹವಾಗಿದ್ದ 12,008 ತೆಂಗಿನಕಾಯಿಗಳನ್ನು ಒಬ್ಬರೇ ವ್ಯಕ್ತಿ ಒಡೆದಿದ್ದಾರೆ. ಕಣ್ಣೂರು ಜಿಲ್ಲೆಯ ಉಳ್ಳಿಕಲ್ನಲ್ಲಿರುವ ದೇವಾಲಯದಲ್ಲಿ ಕೊಡಗು ಹಾಗೂ ಕೇರಳದ ಜನರು ಜೊತೆಯಾಗಿ ಈ ಉತ್ಸವ ಆಚರಿಸುತ್ತಾರೆ.
ಕೇವಲ 174 ನಿಮಿಷಗಳಲ್ಲಿ ಒಟ್ಟು 12,008 ಈಡುಗಾಯಿಗಳನ್ನು ಒಡೆದಿರುವ ಸಾಹಸಿ, ಒಂದು ನಿಮಿಷಕ್ಕೆ 69 ತೆಂಗಿನಕಾಯಿಗಳಂತೆ ಒಡೆದಿದ್ದಾರೆ. ಮಾತ್ರವಲ್ಲ, ಹರಕೆ ಮುಗಿದ ಬಳಿಕ ಶಿವತಾಂಡವ ನೃತ್ಯದಲ್ಲೂ ಪಾಲ್ಗೊಂಡಿದ್ದಾರೆ.