ಕೊಲ್ಕತಾ: ಇತ್ತೀಚಿಗೆ ಪಶ್ಚಿಮ ಬಂಗಾಳದ ಸಾಗರ್ ದಿಗಿ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್(TMC) ಪಕ್ಷವು ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲುಂಡ ಕಾರಣ ಸಚಿವ ಗುಲಾಂ ರಬ್ಬಾನಿ ಅವರನ್ನು ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯಿಂದ ವಜಾ ಮಾಡಿ ಖಾತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯಿಂದ ವಜಾ ಮಾಡಿದ ನಂತರ ಸಚಿವ ಗುಲಾಂ ರಬ್ಬಾನಿಗೆ ತೋಟಗಾರಿಕೆ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ
ಸೋಮವಾರ ನಡೆದ ಸಚಿವ ಸಂಪುಟ ಸಭೆಯ ನಂತರ ವಲಸೆ ಕಾರ್ಮಿಕರು ಮತ್ತು ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಸಾಗರ್ ದಿಗಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ವಲಸೆ ಕಾರ್ಮಿಕರು ಹಾಗೂ ಅಲ್ಪಸಂಖ್ಯಾತರು ವಾಸವಿದ್ದಾರೆ.
ಇದನ್ನೂ ಓದಿ: ನೋವು ನಿವಾರಕ, ಆ್ಯಂಟಿ ಬಯೋಟಿಕ್ ಸೇರಿದಂತೆ ಅಗತ್ಯ ಔಷಧಗಳು ಏಪ್ರಿಲ್ನಿಂದ ಇನ್ನಷ್ಟು ದುಬಾರಿ
TMC ಶಾಸಕ ಸುಬ್ರತಾ ಸಾಹಾ ಸಾವಿನಿಂದ ತೆರವಾಗಿದ್ದ ಸಾಗರ್ ದಿಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೇರನ್ ಬಿಸ್ವಾಸ್ ತೃಣಮೂಲ ಕಾಂಗ್ರೆಸ್ನ ದೇಬಶಿಶ್ ಬ್ಯಾನರ್ಜಿ ಎದುರು 22,000 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತರ ಮತಗಳ ಮೇಲೆ ಹಿಡಿತ ಸಾಧಿಸಿದ್ದ ಟಿಎಂಸಿ ಪಕ್ಷಕ್ಕೆ ಸಾಗರ್ ದಿಗಿ ವಿಧಾನಸಭೆ ಉಪಚುನಾವಣೆಯ ಸೋಲು ತೀವ್ರ ಮುಖಭಂಗವನ್ನುಂಟು ಮಾಡಿದೆ. ಪಕ್ಷವು ಸೋಲಿಗೆ ಕಾರಣವಾದ ಆಂಶಗಳನ್ನ ಪರರ್ಮಾಶಿಸುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.