ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ರಂಗು ಹೆಚ್ಚಲಾರಂಭಿಸಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸದೊಂದು ಯೋಜನೆ ಆರಂಭಿಸಿದ್ದಾರೆ. ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ ನೀಡುವ ನಿಟ್ಟಿನಲ್ಲಿ ಮಾ ಕ್ಯಾಂಟೀನ್ ತೆರೆಯಲಾಗಿದೆ.
ಮಮತಾ ಬ್ಯಾನರ್ಜಿಯ ಮಾ ಕ್ಯಾಂಟೀನ್ ಸೋಮವಾರದಿಂದ ಜಾರಿಯಾಗಿದೆ. ಕರ್ನಾಟಕದ ಇಂದಿರಾ ಕ್ಯಾಂಟೀನ್, ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ರೀತಿಯಲ್ಲಿಯೇ ಈ ಮಾ ಕ್ಯಾಂಟೀನ್ ಕೂಡ ಕಾರ್ಯನಿರ್ವಹಿಸಲಿದೆ. ಸಬ್ಸಿಡಿ ದರದಲ್ಲಿ ಊಟ ಮತ್ತು ತಿಂಡಿಯನ್ನು ವಿತರಣೆ ಮಾಡುವ ಉದ್ದೇಶ ಹೊಂದಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇದು ರಾಜ್ಯದ ಪ್ರತಿಯೊಬ್ಬ ತಾಯಿಗಾಗಿ ಮಾಡಿರುವ ಯೋಜನೆ. ಯಾವೊಬ್ಬ ಬಡವನೂ ಖಾಲಿ ಹೊಟ್ಟೆಯಲ್ಲಿರಬಾರದು ಎನ್ನುವುದು ನಮ್ಮ ಮೂಲ ಉದ್ದೇಶ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ ಸೇರಿ ರಾಜ್ಯದ 27 ಪ್ರದೇಶಗಳಲ್ಲಿ ಸೋಮವಾರ ಮಾ ಕ್ಯಾಂಟೀನ್ ಲೋಕಾರ್ಪಣೆಯಾಗಿದೆ. ಈ ಯೋಜನೆಗೆಂದು ರಾಜ್ಯ ಸರ್ಕಾರ 100 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಮಮತಾ ಅವರ ಮಾ ಕ್ಯಾಂಟೀನ್ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ. ರಾಜ್ಯದ ಜನರನ್ನು ಭಿಕ್ಷೆ ಬೇಡುವ ಸ್ಥಿತಿಗೆ ದೀದಿ ತಂದಿದ್ದಾರೆ. ಈಗ ಅವರಿಗೆ ಸರ್ಕಾರಿ ಊಟ ಮಾಡದಿದ್ದರೆ ಗತಿ ಇಲ್ಲ ಎನ್ನುವಂತಾಗಿದೆ. ಅದಕ್ಕಾಗಿಯೇ ಈ ಕ್ಯಾಂಟೀನ್ ಯೋಜನೆ ಹಮ್ಮಿಕೊಂಡಿದ್ದಾರೆ. ಇದೆಲ್ಲ ಅವರ ವೋಟ್ ಬ್ಯಾಂಕಿಂಗ್ ತಂತ್ರಗಳು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ದೂರಿದ್ದಾರೆ. (ಏಜೆನ್ಸೀಸ್)
‘3 ದಿನ ನಿಂಗೆ, 3 ದಿನ ನಂಗೆ’ ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಹಿಂದೆ ಬಿದ್ದ ಪೊಲೀಸರು
‘ರಾಮ ಮಂದಿರಕ್ಕೆ ನನ್ನೆಲ್ಲ ಆಭರಣ ಅರ್ಪಿಸಿ’ ಹೆಂಡತಿಯ ಕೊನೆಯಾಸೆ ನೆರವೇರಿಸಿದ ಗಂಡ