More

    ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡಿದರೆ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷ ಜೈಲು!

    ಡೆಹ್ರಾಡೂನ್: ಉತ್ತರಾಖಂಡದಲ್ಲಿ ನೇಮಕಾತಿ ಹಗರಣಗಳು ಮತ್ತು ಪೇಪರ್ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಂಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪರೀಕ್ಷೆಗಳಲ್ಲಿ ನಕಲು ಮಾಡುವವರು ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಭಾನುವಾರ ಹೇಳಿದ್ದಾರೆ.

    “ಯುವಕರ ಕನಸು, ಆಕಾಂಕ್ಷೆಗಳ ಜತೆ ನಮ್ಮ ಸರಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಇನ್ನುಮುಂದೆ ಯಾರೇ ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡಿದರೆ ಅವರಿಗೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಇದರೊಂದಿಗೆ ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು” ಎಂದು ಹೇಳಿದರು. ಕಲ್ಸಿಯಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಘೋಷಣೆಯನ್ನು ಮಾಡಿದ್ದರು.

    ಉತ್ತರಾಖಂಡದ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್ ಶುಕ್ರವಾರ ಉತ್ತರಾಖಂಡ ಸ್ಪರ್ಧಾತ್ಮಕ ಪರೀಕ್ಷೆ (ನೇಮಕಾತಿಯಲ್ಲಿ ಅಕ್ರಮ ವಿಧಾನಗಳ ತಡೆಗಟ್ಟುವಿಕೆ ಮತ್ತು ಪರಿಹಾರಕ್ಕಾಗಿ ಕ್ರಮಗಳು) ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ, ಇದನ್ನು ನಕಲು ವಿರೋಧಿ ಸುಗ್ರೀವಾಜ್ಞೆ ಎಂದು ಜನಪ್ರಿಯವಾಗಿ ಕರೆಯಲಾಗುತ್ತಿದೆ.

    ಉತ್ತರಾಖಂಡ ರಾಜ್ಯದಲ್ಲಿ ಪೇಪರ್ ಸೋರಿಕೆ ಪ್ರಕರಣಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿರುವುದಾಗಿ ಈ ಹಿಂದೆ ಸಿಎಂ ಘೋಷಿಸಿದ್ದರು. ರಾಜ್ಯಪಾಲರ ಒಪ್ಪಿಗೆ ಮೇರೆಗೆ ಇದೀಗ ಸುಗ್ರೀವಾಜ್ಞೆ ಕಾನೂನಾಗಿ ರೂಪುಗೊಂಡಿದೆ.

    ಕಳೆದ ವಾರ, ರಾಜ್ಯದ ನಿರುದ್ಯೋಗಿಗಳ ಸಂಘಟನೆಯಾದ ಬೆರೋಜ್‌ಗರ್ ಸಂಘದ ಯುವಕರು ಡೆಹ್ರಾಡೂನ್‌ನ ಮುಖ್ಯ ರಾಜಪುರ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದರು. ಆದೇಶವನ್ನು ಜಾರಿಗೊಳಿಸಲು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದ ನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರ ಪ್ರಕಾರ, ಪ್ರತಿಭಟನಾಕಾರರು ಪ್ರತಿಭಟನೆಯ ಸಮಯದಲ್ಲಿ ಅವರ ಮೇಲೆ ಕಲ್ಲು ತೂರಿ ಅವರ ವಾಹನಗಳಿಗೆ ಹಾನಿ ಮಾಡಿದ್ದರು.

    ಪ್ರತಿಭಟನೆಯ ವೇಳೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಬೆರೋಜ್‌ಗರ್ ಸಂಘದ ಅಧ್ಯಕ್ಷ ಬಾಬಿ ಪನ್ವಾರ್ ಸೇರಿದಂತೆ 13 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲು ತೂರಾಟದ ಘಟನೆಯಲ್ಲಿ ಒಟ್ಟು 15 ಪೊಲೀಸರು ಗಾಯಗೊಂಡಿದ್ದಾರೆ. ಕಲ್ಸಿಯ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಕಟ್ಟುನಿಟ್ಟಾದ ನಕಲು ತಡೆ ಕಾನೂನನ್ನು ಜಾರಿಗೆ ತಂದಿರುವುದರಿಂದ ಈಗ ಯುವಕರ ಭವಿಷ್ಯಕ್ಕೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts