ನವದೆಹಲಿ: ಭಾರತದ ವಿವಿಧ ಬ್ಯಾಂಕ್ಗಳಿಂದ 9 ಸಾವಿರ ಕೋಟಿ ರೂ.ಗೂ ಹೆಚ್ಚಿನ ಸಾಲ ಮಾಡಿ ಲಂಡನ್ಗೆ ಪರಾರಿಯಾಗಿರುವ ಕಿಂಗ್ ಆಫ್ ಗುಡ್ ಟೈಮ್ಸ್ ಖ್ಯಾತಿಯ ವಾಣಿಜ್ಯೋದ್ಯಮಿ ವಿಜಯ್ ಮಲ್ಯ 13,960 ಕೋಟಿ ರೂ.ಗಳ ಸಮಗ್ರ ಸಾಲ ತೀರುವಳಿ ಪ್ಯಾಕೇಜ್ ರೂಪಿಸಿರುವುದಾಗಿಯೂ, ಅದನ್ನು ಪಡೆದು ತಮ್ಮನ್ನು ಆರೋಪ ಮುಕ್ತಗೊಳಿಸುವಂತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಿದ್ದಾರೆ.
ಲಂಡನ್ನಲ್ಲಿ ಅಡಗಿಕೊಂಡಿದ್ದ ಅವರನ್ನು ಭಾರತಕ್ಕೆ ಗಡೀಪಾರು ಮಾಡಿ, ಸರ್ಕಾರಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ಕೋರ್ಟ್ಗಳು ಆದೇಶಿಸಿವೆ. ಆದರೆ, ಅಲ್ಲಿಯೇ ಆಶ್ರಯ ಬಯಸಿ ಅರ್ಜಿ ಸಲ್ಲಿಸಿರುವ ಮಲ್ಯ, ತಮ್ಮ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ 13,960 ಕೋಟಿ ರೂ. ಸಾಲ ತೀರುವಳಿ ಪ್ಯಾಕೇಜ್ ಘೋಷಿಸಿದ್ದಾರೆ ಎನ್ನಲಾಗಿದೆ.
ಮಲ್ಯ ಪರ ವಕೀಲರು ಸುಪ್ರೀಂಕೋರ್ಟ್ಗೆ ತಮ್ಮ ಕಕ್ಷಿದಾರರು ಸಾಲ ತೀರುವಳಿ ಪ್ಯಾಕೇಜ್ ರೂಪಿಸಿರುವುದಾಗಿ ಹೇಳಿದ್ದರೂ, ಅದರ ಮೊತ್ತವನ್ನು ತಿಳಿಸಿರಲಿಲ್ಲ ಎನ್ನಲಾಗಿದೆ. ಆದರೆ, ಕಳೆದ ತಿಂಗಳು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಮಲ್ಯ, ಅದರಲ್ಲಿ 13,960 ಕೋಟಿ ರೂ.ಗಳ ಪ್ಯಾಕೇಜ್ ಬಗ್ಗೆ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ತಾವು ಸಾಲ ಪಡೆದು ವಂಚಿಸಿರುವ 9 ಸಾವಿರ ಕೋಟಿ ರೂ.ಗೆ ಹೋಲಿಸಿದರೆ, ಇದು ಸಾಕಷ್ಟು ಹೆಚ್ಚಾಗಿದೆ ಎಂಬುದು ಅವರ ವಾದವಾಗಿದೆ. ಜತೆಗೆ ಸಾಲ ತೀರುವಳಿ ಬಗ್ಗೆ ಮಲ್ಯ ಪ್ರಸ್ತಾಪಿಸಿರುವ ಇದುವರೆಗಿನ ಗರಿಷ್ಠ ಮೊತ್ತ ಇದಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಚೀನಾ ಸೇನೆ ಹಿಂತೆಗೆತ: 10 ದಿನಗಳವರೆಗೆ ಭಾರತದ ಪರಿಶೀಲನೆ
ಆದರೆ, ಮಲ್ಯ ಅವರ ಈ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸ್ವತಂತ್ರ ಹಕ್ಕಿಯಾಗಿ ತಮ್ಮ ಸ್ವಚ್ಛಂದ ಬದುಕನ್ನು ಮುಂದುವರಿಸಲು ಮಲ್ಯ ಈ ಹಿಂದೆ ಕೂಡ ಇಂಥ ಹಲವು ಪ್ರಸ್ತಾಪಗಳನ್ನು ಇರಿಸಿದ್ದರು. ಆದರೆ, ಅವು ಯಾವುವೂ ಸಾಕಾರವಾಗಿಲ್ಲ. ಈಗಲಾದರೂ ಭಾರತಕ್ಕೆ ಹಸ್ತಾಂತರಗೊಳ್ಳುವ ಮೊದಲು ಅವರು ಪ್ರಸ್ತಾಪಿಸಿ 13,960 ಕೋಟಿ ರೂ.ಗಳನ್ನು ಜಮೆ ಮಾಡಲಿ. ಆಮೇಲೆ ನೋಡೋಣ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠಕ್ಕೆ ಹೇಳಿದರು ಎನ್ನಲಾಗಿದೆ. ತನ್ಮೂಲಕ ಅವರು ಮಲ್ಯ ಅವರು ಭಾರತಕ್ಕೆ ಹಸ್ತಾಂತರಗೊಳ್ಳುವುದು ನಿಶ್ಚಿತ ಎಂಬುದನ್ನು ಪರೋಕ್ಷವಾಗಿ ಖಚಿತಪಡಿಸಿದರು ಎನ್ನಲಾಗಿದೆ.
ಬ್ಯಾಂಕ್ಗಳ ಸಾಲ ವಸೂಲಾತಿಗೆ ಅನುಕೂಲವಾಗುವಂತೆ ತಮ್ಮ ಆಸ್ತಿಗಳ ವಿವರಗಳನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಯದ ಸೂಚನೆಯ ಹೊರತಾಗಿಯೂ ಮಲ್ಯ ಮಾಹಿತಿಯನ್ನು ಒದಗಿಸಿರಲಿಲ್ಲ. ಈ ಹಿನ್ನೆಲೆಯಲ್ಲೆ ಜಾರಿ ನಿರ್ದೆಶನಾಲಯ ದೆಹಲಿ ಕೋರ್ಟ್ನಲ್ಲಿ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದರೆ ಇದರ ವಿಚಾರಣೆಗೆ ಮಲ್ಯ ನಿರಂತರವಾಗಿ ಗೈರುಹಾಜರಾಗಿದ್ದರಿಂದ, ದೆಹಲಿ ಕೋರ್ಟ್ 2016ರಲ್ಲಿ ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು.
ಇದನ್ನೂ ಓದಿ: ಇದೇ ಕೊನೆ, ಇನ್ನು ನನ್ನ ತಂಟೆಗೆ ಬಂದ್ರೆ ಹುಷಾರ್: ಡ್ರೋನ್ ಪ್ರತಾಪ್ ಎಚ್ಚರಿಕೆ!
ಆಗ 2016ರ ಮಾರ್ಚ್ನಲ್ಲಿ ಮಲ್ಯ 4 ಸಾವಿರ ಕೋಟಿ ರೂ.ಗಳನ್ನು ಪಾವತಿಸುವುದಾಗಿ ಪ್ರಸ್ತಾಪ ಇರಿಸಿ, ಕಿಂಗ್ಫಿಶರ್ ಏರ್ಲೈನ್ಸ್ ಸೇರಿ ತಮ್ಮ ಎಲ್ಲ ಕಂಪನಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಒಂದು ತಿಂಗಳ ಬಳಿಕ ಈ ಮೊತ್ತವನ್ನು 6,868 ಕೋಟಿ ರೂ.ಗೆ ಹೆಚ್ಚಿಸಿದ್ದರು.
ಇತ್ತೀಚೆಗೆ ಟ್ವೀಟ್ ಮಾಡಿದ್ದ ಅವರು, ಕೋವಿಡ್-19 ಪರಿಹಾರ ಪ್ಯಾಕೇಜ್ ಘೋಷಿಸಿದ ಸರ್ಕಾರಕ್ಕೆ ಅಭಿನಂದನೆಗಳು. ತಮಗೆ ಎಷ್ಟು ಬೇಕೋ ಅಷ್ಟು ಕರೆನ್ಸಿಯನ್ನು ಪ್ರಿಂಟ್ ಮಾಡಿಕೊಳ್ಳಬಹುದು. ಆದರೆ, ನನ್ನಂಥ ಸಣ್ಣ ವಂತಿಕೆದಾರ ಇರಿಸಿರುವ ಶೇ.100ರಷ್ಟು ಬ್ಯಾಂಕ್ ಸಾಲ ತೀರುವಳಿಯ ಪ್ರಸ್ತಾಪವನ್ನು ನಿರ್ಲಕ್ಷಿಸುತ್ತಿರುವುದು ಏಕೆ? ದಯವಿಟ್ಟು ಬೇಷರತ್ತಾಗಿ ನನ್ನ ಹಣವನ್ನು ಪಡೆದು, ಪ್ರಕರಣಗಳನ್ನು ಕೊನೆಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದರು.
VIDEO|PHOTOS: ಲೇಹ್ ನಲ್ಲಿ ಭಾರತೀಯ ಸಶಸ್ತ್ರಪಡೆಗಳ ಪ್ಯಾರಾ ಡ್ರಾಪಿಂಗ್ ಕವಾಯತು ಪ್ರದರ್ಶನ