ನವದೆಹಲಿ: ಲಡಾಖ್ನ ಪೂರ್ವಭಾಗದಲ್ಲಿ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರು ಸ್ಥಳದಿಂದ ಹಿಂತೆಗೆದಿರುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸೇನಾಪಡೆ ನಿರ್ಧರಿಸಿದೆ. ಇದಕ್ಕಾಗಿ ಅದು ಆ ಪ್ರದೇಶದಲ್ಲಿ ಮುಂದಿನ 10 ದಿನಗಳವರೆಗೆ ಪರಿಶೀಲನಾ ಕಾರ್ಯಾಚರಣೆ ಕೈಗೊಳ್ಳಲಿದೆ.
ಭಾರತದ 14 ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ದಕ್ಷಿಣ ಕ್ಸಿನ್ಜಿಯಾಂಗ್ ಮಿಲಿಟರಿ ಡಿಸ್ಟ್ರಿಕ್ಟ್ನ ಮುಖ್ಯಸ್ಥ ಮೇಜರ್ ಜನರಲ್ ಲಿಯು ಲಿನ್ ನಡುವೆ 5ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ. ಪ್ಯಾಂಗಾಂಗ್ ತ್ಸೊ ಮತ್ತು ಗೋಗ್ರಾ-ಹಾಟ್ಸ್ಪ್ರಿಂಗ್ಸ್ನಲ್ಲಿ ಭಾಗಶಃ ಸೇನಾ ಹಿಂತೆಗೆದ ಬಳಿಕ ಈ ಮಾತುಕತೆಗಳು ನಡೆಯಲಿವೆ. ಈ ಮಾತುಕತೆಯು ಈ ಪ್ರದೇಶದಲ್ಲಿನ ಸೇನೆಯ ಸಂಪೂರ್ಣ ಹಿಂತೆಗೆತಕ್ಕೆ ದಾರಿ ಮಾಡಿಕೊಡುವ ಬಗ್ಗೆ ವಿಶ್ವಾಸ ವ್ಯಕ್ತವಾಗುತ್ತಿದೆ.
ಜು.14ರಂದು ನಡೆದ 4ನೇ ಸುತ್ತಿನ ಮಾತುಕತೆ ವೇಳೆ ಪಿಎಲ್ಎ ಪ್ಯಾಂಗಾಂಗ್ ತ್ಸೊ ಮತ್ತು ಗೋಗ್ರಾ-ಹಾಟ್ಸ್ಪ್ರಿಂಗ್ಗಳಿಂದ ಇನ್ನಷ್ಟು ಹಿಂದಕ್ಕೆ ಸರಿಯುವ ಬಗ್ಗೆ ಭರವಸೆ ನೀಡಿತ್ತು. ಈ ವಿಷಯವಾಗಿ ಅದು ರಾಜಕೀಯ ಮತ್ತು ಮಿಲಿಟರಿ ನಾಯಕರ ಜತೆ ಚರ್ಚಿಸುತ್ತಿದೆ. ಅವರ ಈ ಚರ್ಚೆಗಳು ವಾಸ್ತವದಲ್ಲಿ ಯಾವ ರೂಪದಲ್ಲಿ ಅನುಷ್ಠಾನಕ್ಕೆ ಬರುತ್ತದೆ ಎಂಬುದನ್ನು ನಾವು ಕಾದುನೋಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಇದನ್ನೂ ಓದಿ: ಲಡಾಖ್ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್
ಇದಕ್ಕೆ ಪೂರಕವಾಗಿ ಭಾರತೀಯ ಸೇನಾಪಡೆ ತುಂಬಾ ಅಪರೂಪವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಪ್ರದೇಶದಲ್ಲಿ ಸಂಪೂರ್ಣ ಸೇನಾ ಹಿಂತೆಗೆತದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಆದರೆ, ಒಮ್ಮೆಲೇ ಇದು ಸಾಧ್ಯವಿಲ್ಲ. ಹಂತ, ಹಂತವಾಗಿ ಮುಂದುವರಿಯಬೇಕಾಗುತ್ತದೆ. ನಿರಂತರ ನಿಗಾವಣೆಯ ಅಗತ್ಯವೂ ಇದೆ. ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಉಂಟಾದ ರಕ್ತಸಿಕ್ತ ಘರ್ಷಣೆಯ ಬಳಿಕ ಉಭಯ ಪಾಳೆಯದಲ್ಲೂ ಅಪನಂಬಿಕೆ ಮನೆ ಮಾಡಿದೆ. ಹಾಗಾಗಿ ಪಿಎಲ್ಎ ಯೋಧರು ಹಿಂತೆಗೆತ ಪ್ರಕ್ರಿಯೆ ಬಗ್ಗೆ ನಿರಂತರ ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿತ್ತು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಅವರನ್ನು ಒಳಗೊಂಡ ಉನ್ನತಾಧಿಕಾರದ ಚೀನಾ ಸ್ಟಡಿ ಗ್ರೂಪ್ ಗುರುವಾರ ಸಭೆ ಸೇರಿ ಜು.14ರ ಮಾತುಕತೆಯ ಬಳಿಕ ಲಡಾಖ್ ಪ್ರದೇಶದಲ್ಲಿ ಆಗಿರುವ ಬೆಳವಣಿಗೆ ಕುರಿತು ಚರ್ಚಿಸಿದ ಬೆನ್ನಲ್ಲೇ ಭಾರತೀಯ ಸೇನಾಪಡೆ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಪಾಕಿಸ್ತಾನದ ತಾಲಿಬಾನ್ ನಾಯಕ ಕಪ್ಪುಪಟ್ಟಿಗೆ: ವಿಶ್ವಸಂಸ್ಥೆ ಮಹತ್ವದ ಕ್ರಮ