ಚಾಮರಾನಗರ: ಸರ್ಕಾರಿ ಕಟ್ಟಡಗಳ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚನೆ ನೀಡಿದರು.
ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಗುರುವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೊಳ್ಳೇಗಾಲ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾರಂಭವಾದ ದಿನದಿಂದ ಇಲ್ಲಿವರೆಗೂ ಸಾವಿರಾರು ಅಭ್ಯರ್ಥಿಗಳು ತರಬೇತಿ ಪಡೆದು ವಿವಿಧೆಡೆ ಉದ್ಯೋಗ ಪಡೆದುಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ. ಮೆಕಾನಿಕ್, ಎಲೆಕ್ಟ್ರಿಕಲ್, ಫಿಟ್ಟರ್ ಇತರೆ ಒಟ್ಟು 10 ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಇದೀಗ ಈ ಸಂಸ್ಥೆಗೆ 1.19 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾಮಗಾರಿ ಕೈಗೊಳ್ಳಲು ಮೊದಲ ಹಂತದಲ್ಲಿ 59 ಲಕ್ಷ ರೂ. ಬಿಡುಗಡೆಯಾಗಿದೆ. ಈ ಕಟ್ಟಡ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ನಿರ್ವಹಿಸುತ್ತಿದ್ದು, ಕಾಮಗಾರಿ ಗುಣಮಟ್ಟತೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಕಾಪಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಚಾಮರಾಜನಗರ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿದೆ. ರಾಜ್ಯದಲ್ಲಿ 14 ಸ್ಥಾನದಲ್ಲಿದ್ದ ನಮ್ಮ ಜಿಲ್ಲೆ 8 ನೇ ಸ್ಥಾನಕ್ಕೆ ಬಂದಿದೆ. ಇದಕ್ಕೆ ಇಲ್ಲಿರುವ ಬೋಧನ ವ್ಯವಸ್ಥೆ ಕಾರಣ ಎಂದು ಶ್ಲಾಘಿಸಿದರು.
ನಗರಸಭೆ ಸದಸ್ಯ ನಾಗಸುಂದ್ರಮ್ಮ, ಪುಷ್ಪಲತಾ, ಪ್ರಶಾಂತ್, ಜಯಮೇರಿ, ರಾಘವೇಂದ್ರ, ಶಾಂತರಾಜು ಬಸ್ತೀಪುರ, ಜಿ.ಸುರೇಶ್, ಎಲ್. ನಾಗೇಂದ್ರ, ನಗರಸಭಾ ಆಯುಕ್ತ ರಮೇಶ್, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಜಿಪಂ ಮಾಜಿ ಸದಸ್ಯ ಯೋಗೇಶ್, ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್, ನಿರ್ಮಿತ ಕೇಂದ್ರ ಪ್ರಾಜೆಕ್ಟ್ ಡೈರೆಕ್ಟರ್ ಮಂಜುಳಾ, ಇಂಜಿನಿಯರ್ ಪ್ರತಾಪ್, ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮುರುಳಿಧರ್ ಮತ್ತಿತರಿದ್ದರು.