ಮಹಾರಾಷ್ಟ್ರ: ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಗಡಿ ವಿವಾದ ಎದ್ದೇಳುತ್ತಲೇ ಇರುತ್ತದೆ. ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಆಗ್ರ ಮಾಡಿರುವ ಮರಾಠಿಗರಿಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ ಕರ್ನಾಟಕ ಮುಖ್ಯಮಂತ್ರಿಯ ಅಣಕು ಶವ ಯಾತ್ರೆ ಮಾಡುವ ಮೂಲಕ ಪುಂಡಾಟಿಕೆ ನಡೆಸಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದದ ಸಮಸ್ಯೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡುತ್ತಾ, ಕರ್ನಾಟಕದಲ್ಲಿರುವ ನಿಪ್ಪಾಣಿ ಹಾಗೂ ಬೆಳಗಾವಿಯನ್ನು ಮಹಾರಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇವೇಂದ್ರ ಫಡ್ನವೀಸ್ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ನನಸಾಗುವುದಿಲ್ಲ. ನೆಲ, ಜಲ ಹಾಗೂ ಗಡಿಯ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರಕ್ಕೆ ಖಡಕ್ ಪ್ರತಿಕ್ರಿಯೆ ಕೊಟ್ಟ ನಂತರ ಶಿವಸೇನೆ ಕಾರ್ಯಕರ್ತರು ಪುಂಡಾಟ ಶುರು ಮಾಡಿಕೊಂಡಿದ್ದಾರೆ. ಇದೀಗ ಶಿವಸೇನೆ ಕಾರ್ಯಕರ್ತರು ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಣಕು ಶವಯಾತ್ರೆ ಮಾಡಿ ವಿವಾದಕ್ಕೆ ಕಿಚ್ಚು ಹತ್ತಿಸುವ ಕೆಲಸ ಮಾಡಿದ್ದಾರೆ.
ಇವತ್ತು ಮಹಾರಾಷ್ಟ್ರದ ದೌಂಡ್ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ಗೆ ಕಪ್ಪು ಮಸಿ ಬಳಿದು ಮತ್ತೆ ಮರಾಠಿ ಭಾಷಿಗರು ಪುಂಡಾಟಿಕೆ ಶುರು ಮಾಡಿದ್ದರು. ಈ ಕೃತ್ಯವನ್ನು ಪ್ರತಿಭಟನೆ ರೀತಿಯಲ್ಲಿ ಮಾಡಿದ್ದರು ಎಂದು ತಳ್ಳಿ ಹಾಕಬಹುದಿತ್ತು. ಆದರೆ ಈಗ ಮರಾಠಿ ಭಾಷಿಗರ ಪುಂಡಾಟ ಮತ್ತೊಂದು ಹಂತ ತಲುಪಿದೆ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಚುನಾವಣೆ ಇನ್ನೇನು ಹತ್ತಿರದಲ್ಲೇ ಇದೆ. ಈ ಘಟನೆಯ ವಿರುದ್ಧ ಕರ್ನಾಟಕ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಎನ್ನುವ ವಿಷಯ ಮಹಾರಾಷ್ಟ್ರ ಗಡಿ ಭಾಗದಲ್ಲಿ ನಡೆಯುವ ಚುನಾವಣೆ ಮೇಲೆ ಎದ್ದು ಕಾಣಲಿದೆ.