ಮಹಾಲಿಂಗಪುರ: ಕಳೆದ ಐದಾರು ವರ್ಷಗಳಿಂದ ಬರ, ಅತಿವೃಷ್ಟಿ, ಅನಾವೃಷ್ಟಿ, ನೋಟ್ ಬ್ಯಾನ್, ಜಿಎಸ್ಟಿ ಹೊಡೆತ ಇವೆಲ್ಲಕ್ಕೂ ಹೊಂದಿಕೊಳ್ಳುವ ಮುನ್ನವೇ ಕರೊನಾ ಲಾಕ್ಡೌನ್ನಿಂದ ನೇಕಾರರು ಕಂಗಾಲಾಗಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಬೃಹತ್ ಕೈಗಾರಿಕೆ ಹೊರತುಪಡಿಸಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ನಿರ್ಜೀವವಾಗಿವೆ. ಅನೇಕರು ನೇಣಿಗೆ ಶರಣಾಗಿದ್ದಾರೆ. ಆರ್ಥಿಕ ಹಿನ್ನೆಡೆ ದೇಶ ಮಾತ್ರ ಆನುಭವಿಸುತ್ತಿಲ್ಲ. ಜನಸಾಮಾನ್ಯರೂ ಅನುಭವಿಸುತ್ತಿದ್ದಾರೆ, ಅದರಲ್ಲಿ ವಿವಿಧ ನೇಕಾರರೂ ಕೂಡ ಇದ್ದಾರೆ. ಸರ್ಕಾರ ನೇಕಾರರಿಗೆ ನೆರವು ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೇಕಾರರಿಗೆ ಈಗ 2 ಸಾವಿರ ರೂ. ಕೊಡ್ತೀನಿ ಅಂತಿರಿ. ಆದರೆ, ಪ್ರತಿ ನೇಕಾರ ಕುಟುಂಬಕ್ಕೆ 10 ಸಾವಿರ ರೂ. ಕೊಡಬೇಕು. ರೈತರಿಗೆ ಮಾತ್ರ ಅಲ್ಲ. ಟ್ಯಾಕ್ಸಿ, ರಿಕ್ಷಾ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಸವಿತಾ ಸಮಾಜ, ಕುಂಬಾರ, ಕಮ್ಮಾರ ಸಮಾಜ ಹೀಗೆ ಎಲ್ಲ ಕಾಯಕಜೀವಿಗಳಿಗೆ 10 ಸಾವಿರ ರೂ. ಕೊಡಿ. ಕೈಮುಗಿದು ಕೇಳುತ್ತೇವೆ ಎಂದರು.
ರಬಕವಿಯ ವಿದ್ಯುತ್ ಚಾಲಿತ ಮಗ್ಗಗಳ ಅಧ್ಯಕ್ಷ ನೀಲಕಂಠ ಮುತ್ತೂರ, ಮಲ್ಲಪ್ಪ ಭಾವಿಕಟ್ಟಿ, ರಾಜೇಂದ್ರ ಭದ್ರನ್ನವರ, ಶಂಕರ ಸೊನ್ನದ ಮಾತನಾಡಿ, ಕಳೆದ 7 ತಿಂಗಳಲ್ಲಿ ನೂಲಿನ ಬೆಲೆ ಐದು ಪಟ್ಟು ಹೆಚ್ಚಾಗಿದೆ ಎಂದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ, ಪುರಸಭೆ ಸದಸ್ಯ ಜಾವೇದ್ ಬಾಗವಾನ್, ರಾಜು ಭಾವಿಕಟ್ಟಿ, ಸತ್ಯಪ್ಪ ಮಗದುಮ್, ಹೊಳೆಪ್ಪ ಬಾಡಗಿ, ವಿಠ್ಠಲ ಸಂಶಿ, ಶಿವಾನಂದ ಗಾಳಿ ಮತ್ತಿತರರು ಇದ್ದರು.
ಸ್ವಾಮಿ ಯಡಿಯೂರಪ್ಪನವರೇ ನೀವು ಮಹಾನ್ ನಾಯಕರು, ನೇಕಾರರ ಬಗ್ಗೆ ಬಹಳಷ್ಟು ಪ್ರೀತಿ ಉಳ್ಳವರು. ಆದರೆ, ಪ್ಯಾಕೇಜ್ ಘೋಷಣೆ ಮಾಡುವಾಗ ನೇಕಾರರ ನೆನಪಾಗುಪುದಿಲ್ಲವೆ. ಕಳೆದ ವರ್ಷವೂ ಹೀಗೆ ಮಾಡಿದಿರಿ. ಈ ಬಾರಿಯೂ ನೆನಪಾಗಲಿಲ್ಲ. ಶಾಸಕರು ಬಂದು ನಿಮಗೆ ನೆನಪು ಮಾಡಬೇಕೇ. ಚುನಾವಣೆಯಲ್ಲಿ ಮತ ಗಳಿಸಲಿಕ್ಕೆ ಮಾತ್ರ ನೇಕಾರರು ಬೇಕು. ಆದರೆ, ಕೃತಿಯಲ್ಲಿ ಅಲ್ಲ.
– ಉಮಾಶ್ರೀ, ಮಾಜಿ ಸಚಿವೆ