ರಾಮನಗರ: ಮಾಗಡಿ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಮರ್ಯಾದೆ ಹತ್ಯೆ ನಡೆದಿದ್ದು, ಅಪ್ಪ-ಮತ್ತು ತಮ್ಮನಿಂದಲೇ ಯುವತಿ ಭೀಕರವಾಗಿ ಕೊಲೆಯಾಗಿದ್ದಾಳೆ.
ಅನ್ಯಕೋಮಿನ ಯುವಕನನ್ನು ಪ್ರೀತಿಸಿದ 19 ವರ್ಷದ ಹೇಮಲತಾಳನ್ನು ಆಕೆಯ ಕುಟುಂಬಸ್ಥರೇ ಕೊಲೆ ಮಾಡಿ ಜಮೀನಿನಲ್ಲಿ ಹೂತು ಹಾಕಿ ಪ್ರಕರಣ ಮುಚ್ಚಿಹಾಕಲು ಹೈಡ್ರಾಮ ಮಾಡಿದ್ದರು. ಇದರ ನಡುವೆ ಜಾಲತಾಣಗಳಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಬರ್ಬರವಾಗಿ ಕೊಲ್ಲಲಾಗಿದೆ ಎಂಬ ವದಂತಿಯನ್ನೂ ಹಬ್ಬಿಸಲಾಗಿತ್ತು. ಇದು ಭಾರೀ ಚರ್ಚೆಗೆ ಗ್ರಾಸ ಮಾಡಿಕೊಟ್ಟಿತ್ತು. ಯುವತಿಯನ್ನು ಕುಟುಂಬಸ್ಥರೇ ಮರ್ಯಾದಾ ಹತ್ಯೆ ಮಾಡಿದ್ದಾರೆ ಎಂಬುದು ಬೆಟ್ಟಹಳ್ಳಿಯ ಪ್ರತಿಯೊಬ್ಬರಿಗೂ ತಿಳಿದಿತ್ತಾದರೂ ಯಾರೊಬ್ಬರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಇಡೀ ಪ್ರಕರಣದ ದಿಕ್ಕನ್ನೇ ತಪ್ಪಿಸುವ ಸಂಚು ನಡೆದಿತ್ತು. ಇದರ ಇಂಚಿಂಚೂ ಮಾಹಿತಿ ಇಲ್ಲಿದೆ.
ಅಕ್ಟೋಬರ್ 9ರಂದು ಹೇಮಲತಾಳ ತಂದೆ ಕೃಷ್ಣಪ್ಪ ಕುದೂರು ಪೊಲೀಸ್ ಠಾಣೆಗೆ ತೆರಳಿ ‘ನನ್ನ ಮಗಳು ಕಾಣೆಯಾಗಿದ್ದಾಳೆ. ಆಕೆಯನ್ನು ಪ್ರೀತಿಸುತ್ತಿದ್ದ ಯುವಕ ಪುನೀತ್ ಎನ್ನುವವನ ಮೇಲೆ ಅನುಮಾನವಿದೆ. ನನ್ನ ಮಗಳನ್ನು ಹುಡುಕಿಕೊಡಿ’ ಎಂದು ದೂರು ದಾಖಲಿಸಿದ್ದರು. ಮರುದಿನವೇ ಮತ್ತೊಮ್ಮೆ ಪೊಲೀಸ್ ಠಾಣೆಗೆ ಆಗಮಿಸಿದ್ದ ಕೃಷ್ಣಪ್ಪ, ‘ನಮ್ಮ ಗ್ರಾಮದ ಹೊಲದಲ್ಲಿ ಮಗಳ ಚಪ್ಪಲಿ ಸಿಕ್ಕಿದೆ. ಅದು ರಕ್ತಮಯವಾಗಿದೆ. ಸಂಬಂಧಿಕರ ಜಮೀನಿನಲ್ಲಿ ಅಡಕೆ ಸಸಿ ನೆಡಲು ತೆಗಿದಿದ್ದ ಗುಂಡಿಯಲ್ಲಿ ಹೊಸದಾಗಿ ಮಣ್ಣು ಮುಚ್ಚಿರುವಂತೆ ಕಂಡು ಬಂದಿದೆ. ಅಲ್ಲಿ ಮಗಳನ್ನು ಮಣ್ಣು ಮಾಡಿದ್ದಾರೆ’ ಎಂದು ಮತ್ತೊಂದು ಹೇಳಿಕೆ ನೀಡಿದ್ದರು. ಆ ಮೂಲಕ ಇಡೀ ಕೊಲೆ ಪ್ರಕರಣವನ್ನು ಬೇರೊಬ್ಬರ ಮೇಲೆ ಹೊರಿಸುವ ತಂತ್ರ ಹೆಣೆದಿದ್ದರು. ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ನಡುವೆ ಯುವತಿ ಮೇಲೆ ಕಿಡಿಗೇಡಿಗಳು ಸಾಮೂಹಿಕ ಅತ್ಯಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮೃತಳ ಸಾವಿಗೆ ನ್ಯಾಯ ಸಿಕ್ತಿಲ್ಲ ಎಂಬ ವದಂತಿ ಕೂಡ ಹಬ್ಬಿತ್ತು. ಕೆಲ ಸಂಘಟನೆಗಳು ಆರೋಪಿಗಳ ಪತ್ತೆಗಾಗಿ ಪ್ರತಿಭಟನೆಯನ್ನೂ ನಡೆಸಿದ್ದವು.
ಅತ್ಯಂತ ಸೂಕ್ಷ್ಮವಾಗಿದ್ದ ಯುವತಿ ಕೊಲೆ ಪ್ರಕರಣವನ್ನು ಒಂದು ವಾರದೊಳಗೆ ಭೇದಿಸಿರುವ ಮಾಗಡಿ ಪೊಲೀಸರು ಇದು ಮರ್ಯಾದಾ ಹತ್ಯೆ ಎಂದು ತಿಳಿಯುತ್ತಿದ್ದಂತೆ, ಹೇಮಲತಾಳ ತಂದೆ ಕೃಷ್ಣಪ್ಪ (48), ಆಕೆಯ ಸಹೋದರ ಚೇತನ್ ಅಲಿಯಾಸ್ ಯೋಗಿ (21) ಹಾಗೂ ಇನ್ನೊಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.
ಅನ್ಯಕೋಮಿಗೆ ಸೇರಿದ ಯುವಕನನ್ನು ಯುವತಿ ಪ್ರೀತಿಸಿದ್ದೇ ಕೊಲೆಗೆ ಕಾರಣ ಎಂದು ಕೇಂದ್ರ ವಲಯದ ಐಜಿ ಸೀಮಂತ್ ಕುಮಾರ್ ಸಿಂಗ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೊಲೆಯನ್ನು ಯಾವ ರೀತಿ ಮಾಡಲಾಗಿದೆ. ಇನ್ನು ಎಷ್ಟು ಮಂದಿ ಆರೋಪಿಗಳಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಯುವತಿ ಕೊಲೆಯನ್ನು ಸಾಮೂಹಿಕ ಅತ್ಯಚಾರ ಎಂದು ಜಾಲತಾಣಗಳಲ್ಲಿ ಹಬ್ಬಿಸಿದ್ದು ಮಾತ್ರವಲ್ಲದೆ ಕರ್ನಾಟಕ ಪೊಲೀಸ್ ಇಲಾಖೆಯನ್ನೇ ಅಣಕಿಸುವ ಕೆಲಸ ಮಾಡಿದ್ದ ನೆಟ್ಟಿಗರ ವಿರುದ್ಧವೂ ಪ್ರಕರಣ ದಾಖಲಿಸುವುದಾಗಿ ಎಸ್ಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಕಾಲುವೆಗೆ ಬಿದ್ದಿದ್ದ ಕಾರು, ಒಂದು ದಿನದ ಬಳಿಕ ಪತ್ತೆ! ಬಾಗಿಲು ತೆರೆದವರಿಗೆ ಕಾದಿತ್ತು ಶಾಕ್