ಬೆಂಗಳೂರು: ಮೂರು ಸಾವಿರ ಅಘೋರಿಗಳ ನಡುವೆ ನಟಿಸಿದ್ದು ನನ್ನ ಜೀವನದಲ್ಲಿ ಆದಂತಹ ಒಂದು ಅದ್ಭುತ ಅನುಭವ …’ ಗುರುವಾರವಷ್ಟೇ ಕಾಶಿಯಲ್ಲಿ ‘ಮದಗಜ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿದ ಶ್ರೀಮುರಳಿ ಅವರ ಮಾತಿದು.
ಈ ಭಾಗದ ಚಿತ್ರೀಕರಣದಿಂದ ಥ್ರಿಲ್ ಆಗಿರುವ ಅವರು, ‘ನಮಸ್ತೆ’ಯೊಂದಿಗೆ ಕಾಶಿಯಿಂದಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನಾನು ಇದೇ ಮೊದಲ ಬಾರಿಗೆ ಕಾಶಿಗೆ ಬಂದಿದ್ದು. ಹಾಗಾಗಿ ನನಗೆ ಹೊಸ ಅನುಭವ. ಪ್ಲ್ಯಾನಿಂಗ್ ಪ್ರಕಾರವೇ ಶೂಟಿಂಗ್ ಮಾಡಿದ್ದೇವೆ. ಶಿವರಾತ್ರಿಯ ದಿನ ಅಘೋರಿಗಳ ಜತೆ ನಟಿಸಿದ್ದು ನನಗೆ ಮರೆಯಲಾಗದ ಘಟನೆ. ನಮ್ಮ ಚಿತ್ರೀಕರಣಕ್ಕೆ ದೇವರು, ಪರಿಸರ, ಟೆಕ್ನಿಶಿಯನ್ಸ್ ಎಲ್ಲರ ಸಹಕಾರವೂ ಬಹಳ ಚೆನ್ನಾಗಿತ್ತು. ಹಾಗಾಗಿ ಸರಿಯಾದ ಸಮಯಕ್ಕೆ ಕೆಲಸ ಮುಗಿದಿದೆ’ಎಂದು ಹೇಳುತ್ತಾರೆ ಶ್ರೀಮುರಳಿ.
‘ಕಾಶಿಯಲ್ಲಿ ಒಟ್ಟು 15 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ನಾಯಕನ ಬಾಲ್ಯದ ಕಥೆ, ಅವನನ್ನು ಪರಿಚಯಿಸುವ ಫೈಟ್ ಮತ್ತು ಹಾಡು ಹೀಗೆ ಒಂದಷ್ಟು ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದೆ. ಕಾಶಿಯ ಹಲವು ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಗಂಗಾರತಿಯ ದೃಶ್ಯಗಳನ್ನು ಶೂಟ್ ಮಾಡಲಾಗಿದೆ. ಪ್ರತಿಯೊಂದು ಶಾಟ್ ಒಂದೊಂದು ಅದ್ಭುತ ಅನುಭವವನ್ನು ನೀಡಿದೆ. ಯುಗಾದಿಗೆ ಟೀಸರ್ ಬಿಡುಗಡೆ ಮಾಡುವ ಯೋಚನೆ ಇದ್ದು, ಈಗಾಗಲೇ ಇಲ್ಲಿಂದಲೇ ಟೀಸರ್ ಕಟ್ ಮಾಡಿ ಕಳಿಸಿದ್ದೇವೆ. ನಮ್ಮ ಇಡೀ ತಂಡ, ಇಲ್ಲಿನ ಚಿತ್ರೀಕರಣವನ್ನು ಅದ್ಭುತವಾಗಿ ಎಂಜಾಯ್ ಮಾಡಿದೆ ’ ಎನ್ನುತ್ತಾರೆ ನಿರ್ದೇಶಕ ಮಹೇಶ್ ಕುಮಾರ್. ಈ ಭಾಗದ ಚಿತ್ರೀಕರಣದಲ್ಲಿ ಶ್ರೀಮುರಳಿ ಜತೆಗೆ ಚಿಕ್ಕಣ್ಣ, ರಂಗಾಯಣ ರಘು ಸೇರಿದಂತೆ ಹಲವು ಪ್ರಮುಖ ಕಲಾವಿದರು ಸಹ ಪಾಲ್ಗೊಂಡಿದ್ದಾರೆ.
ನನ್ನ ಚಿತ್ರ ಬದುಕಿನಲ್ಲಿ ‘ಮದಗಜ’ ಒಂದೊಳ್ಳೆಯ ಸಿನಿಮಾವಾಗುತ್ತದೆ. ಕಾಶಿ ವಿಶ್ವನಾಥೇಶ್ವರ ದೇವಾಲಯ, ಮಣಿಕರ್ಣಿಕಾ ಘಾಟ್ ಸೇರಿದಂತೆ ಇಲ್ಲಿ ಶೂಟಿಂಗ್ ಮಾಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ.
| ಶ್ರೀಮುರಳಿ ನಟ