ತರೀಕೆರೆ: ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ರಮೇಶ್ ಅವಿರೋಧ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಎಂ.ನರೇಂದ್ರ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಎಂ.ರಮೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ, ಸಹಕಾರ ಇಲಾಖೆಗಳ ಸಹಾಯಕ ನಿಬಂಧಕಿ ಆರ್.ಸುನಂದಮ್ಮ ರಮೇಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಎಂ.ರಮೇಶ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪ್ರಸಕ್ತ ಆರ್ಥಿಕ ಸಾಲಿನಲ್ಲಿ 10.85 ಲಕ್ಷ ರೂ. ಲಾಭದಲ್ಲಿರುವ ಶ್ರೀ ರೇವಣಸಿದ್ದೇಶ್ವರ ಕೃಷಿ ಪತ್ತಿನ ಸಹಕಾರ ಸಂಘ, ರೈತರಿಗೆ ಸಕಾಲದಲ್ಲಿ ಕೆಸಿಸಿ ಬೆಳೆ, ಅಡಕೆ ಅಡಮಾನ, ಚಿನ್ನ ಮತ್ತು ಬೆಳ್ಳಿ, ವಾಹನ ಸಾಲ, ಗೊಬ್ಬರ ಆಧಾರ ಸಾಲ ನೀಡಿ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಎಲ್ಲರ ಸಹಕಾರದಿಂದ ಸಿಕ್ಕ ಅಧಿಕಾರವನ್ನು ಉತ್ತಮ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುವುದು ಎಂದರು.