ಬೆಂಗಳೂರು: ಬೆಂಗಳೂರಿನ ಕೊನೆಯ ಡಾನ್ ಎನಿಸಿಕೊಂಡಿದ್ದ ಭೂಗತ ಲೋಕದ ಮಾಜಿ ಪಾತಕಿ ಮುತ್ತಪ್ಪ ರೈ ನಿಧನದ ಬಳಿಕ ಹಲವು ಜನರು ಹಲವು ಬಗೆಯ ಟ್ವೀಟ್ ಮಾಡಿದ್ದಾರೆ. ಆದರೆ, ಅವರ ಸಾವಿಗೆ ಒಂದು ದಿನ ಮೊದಲು ಬೆಂಗಳೂರಿನ ಒಂದು ಕಾಲದ ಡಾನ್ ಜಯರಾಜ್ ಪುತ್ರ ಹಾಗೂ ಚಿತ್ರನಟ ಅಜಿತ್ ಜಯರಾಜ್ ಟ್ವೀಟ್ ಕುತೂಹಲ ಕೆರಳಿಸಿದೆ.
ರಾಜನಾದವನು ತಾನೇಕೆ ರಾಜನಾದ ಎಂಬುದನ್ನು ಮೂರ್ಖರಿಗೆ ಆಗಾಗ ನೆನಪಿಸಬೇಕಾಗುತ್ತಿರುತ್ತದೆ ಎಂಬ ಅರ್ಥದ (Sometimes the king has to remind the fools why he is king… Love you appa) ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: VIDEO| ಭೂಗತ ಲೋಕಕ್ಕೆ ಮುತ್ತಪ್ಪ ರೈ ಬಂದಿದ್ದೇಕೆ?: ಹಿಂದೆ ನೀಡಿದ್ದ ಸಂದರ್ಶನದಲ್ಲಿ ಕುತೂಹಲಕಾರಿ ವಿಚಾರಗಳು!
ಸಾಕಷ್ಟು ಜನರು ಇದಕ್ಕೆ ಬಗೆ ಬಗೆಯಾಗಿ ಪ್ರತಿಕ್ರಿಯಿಸುತ್ತಿರುವಂತೆ ಸುದ್ದಿಗಾರರ ಜತೆ ಮಾತನಾಡಿದ ಅಜಿತ್ ಜಯರಾಜ್, “ನಾನು ಜಯರಾಜ್ ಪುತ್ರ ನಿಜ. ಆದರೆ, ನಾನು ನನ್ನ ತಂದೆಯ ಹೆಸರಿನ ನೆರಳಿನಲ್ಲಿ ಮೇಲೆ ಬರುವುದಕ್ಕಿಂತ ನನ್ನಲ್ಲಿರುವ ಪ್ರತಿಭೆಯಿಂದ ಮೇಲೆ ಬರಬೇಕು ಎಂದು ಬಯಸುವವನು. ಹಾಗಾಗಿ ನಾನು ನಟನಾಗಿ ಚಿತ್ರರಂಗದಲ್ಲಿ ನನ್ನ ಪ್ರತಿಭೆ ತೋರುತ್ತಾ, ಮೇಲೆ ಬರಲು ಯತ್ನಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
8 ತಿಂಗಳ ಮಗು: ಬೆಂಗಳೂರಿನ ಡಾನ್ ಎನಿಸಿಕೊಂಡಿದ್ದ ಎಂ.ಪಿ. ಜಯರಾಜ್ ಅವರು ಹೆಲೆನ್ ಎಂಬುವರನ್ನು ಮದುವೆಯಾಗಿದ್ದರು. ಇವರ ಪುತ್ರನೇ ಅಜಿತ್ ಜಯರಾಜ್. ತಮ್ಮ ತಂದೆ ಎಂ.ಪಿ. ಜಯರಾಜ್ ಹತ್ಯೆಯಾದಾಗ ಅಜಿತ್ ಕೇವಲ 8 ತಿಂಗಳ ಮಗು. ಆಗ 19 ವರ್ಷದವರಾಗಿದ್ದ ಹೆಲೆನ್ ಅವರನ್ನು ಜಯರಾಜ್ ಅವರ ಸಹೋದರ ಎಂ.ಪಿ. ಉಮೇಶ್ ಮದುವೆಯಾಗಿ, ಅಜಿತ್ಗೆ ತಂದೆಯ ಕೊರತೆ ಕಾಡದಂತೆ ನೋಡಿಕೊಂಡರು.
ಹೆಲೆನ್ ಅವರಂತೂ ಪುತ್ರನನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿ, ಆತ ಅಪರಾಧ ಲೋಕದ ಸೆಳೆತಕ್ಕೆ ಒಳಗಾಗದಂತೆ ಎಚ್ಚರ ವಹಿಸಿದರು. ನಿರ್ವಹಣಾಶಾಸ್ತ್ರ ಪದವೀಧರರಾಗಿರುವ ಅಜಿತ್, ಅಗಮ್ಯ ಸೇರಿ ಹಲವು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ.