ಲಖನೌ: ಸಂಭ್ರಮ, ಸಡಗರದಿಂದ ತುಂಬಿದ್ದ ಮದುವೆ ಸಮಾರಂಭವೊಂದು ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಶೋಕ ಸಾಗರದಲ್ಲಿ ಮುಳುಗಿದ ಘಟನೆ ಉತ್ತರ ಪ್ರದೇಶದ ಲಖನೌ ಜಿಲ್ಲೆಯ ಮಲಿಹಾಬಾದ್ನಲ್ಲಿ ನಡೆದಿದೆ. ಮದುವೆ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದ ವಧು, ಹಾರ ವಿನಿಮಯ ಸಂದರ್ಭದಲ್ಲಿ ಹೃದಯ ಸ್ತಂಭನದಿಂದ ದುರಂತ ಸಾವಿಗೀಡಾಗಿದ್ದಾಳೆ.
ಮೃತಳನ್ನು ಶಿವಾಂಗಿ ಶರ್ಮಾ (21) ಎಂದು ಗುರುತಿಸಲಾಗಿದೆ. ಲಖನೌ ಹೊರವಲಯದ ಮಲಿಹಾಬಾದ್ನ ಭದ್ವಾನಾ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಶಿವಾಂಗಿ ಮದುವೆ ಶುಕ್ರವಾರ (ಡಿ.2) ವಿವೇಕ್ ಎಂಬುವರ ಜೊತೆ ನಿಶ್ಚಿಯವಾಗಿತ್ತು. ಮದುವೆಗೆ ಸಂಬಂಧಿಸಿದ ಪೂಜಾ ವಿಧಾನಗಳನ್ನು ಮುಗಿಸಿದ ಶಿವಾಂಗಿ ಮದುವೆ ಮಂಟಪದ ವೇದಿಕೆ ಮೇಲೆ ಬಂದು ಹಾರ ವಿನಿಮಯ ಮಾಡಿಕೊಳ್ಳಲು ವರನಿಗಾಗಿ ಎದುರು ನೋಡುತ್ತಿದ್ದಳು. ವರ ವಿವೇಕ್ ಬಂದ ಕೂಡಲೇ ಇಬ್ಬರೂ ಹಾರ ಬದಲಾಯಿಸಿಕೊಂಡು, ಕ್ಯಾಮೆರಾಗೆ ಇಬ್ಬರು ಪೋಸ್ ನೀಡುವ ವೇಳೆ ಇದ್ದಕ್ಕಿದ್ದಂತೆ ವಧು ಶಿವಾಂಗಿ ಕುಸಿದು ಬಿದ್ದಿದ್ದಾಳೆ. ಇದು ಅಲ್ಲಿ ನೆರದಿದ್ದವರನ್ನು ಆತಂಕಕ್ಕೆ ದೂಡಿತು.
ತಕ್ಷಣ ಶಿವಾಂಗಿಯನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು. ಆದರೆ, ಮಾರ್ಗ ಮಧ್ಯೆಯೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಅಲ್ಲದೆ, ಆಕೆ ಹೃದಯಾಘಾತದಿಂದ ಸಾವಿಗೀಡಾರುವುದಾಗಿ ಖಚಿತಪಡಿಸಿದರು.
ಮದುವೆಗೂ ಮುನ್ನ ಕಳೆದ 15 ರಿಂದ 20 ದಿನ ಶಿವಾಂಗಿ ಜ್ವರದಿಂದ ಬಳಲಿದ್ದಳು. ಕಳೆದ ವಾರ ಶಿವಾಂಗಿ ಚೇತರಿಸಿಕೊಂಡರೂ ಕೂಡ ಆಕೆಯ ರಕ್ತದ ಒತ್ತಡ ತುಂಬಾ ಕಡಿಮೆ ಇತ್ತು. ಮದುವೆಯ ಹಿಂದಿನ ದಿನವೇ ಮತ್ತೆ ಶಿವಾಂಗಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡಿತು. ತಕ್ಷಣ ಅವಳನ್ನು ಮಲಿಹಾಬಾದ್ನಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು. ಈ ವೇಳೆ ಆಕೆಯ ರಕ್ತದ ಒತ್ತಡ ಕಡಿಮೆ ಇತ್ತು. ಬಳಿಕ ಆಕೆಗೆ ಚಿಕಿತ್ಸೆ ನೀಡಿ ಬಿಪಿಯನ್ನು ಸುಧಾರಿಸಲಾಗಿತ್ತು. ನಂತರ ಆಕೆಯನ್ನು ವಾಪಸ್ ಮನೆಗೆ ಕರೆತರಲಾಗಿತ್ತು. ಆದರೆ, ಮದುವೆಯ ದಿನ ವೇದಿಕೆಯಲ್ಲೇ ಕುಸಿದುಬಿದ್ದು ಶಿವಾಂಗಿ ಸಾವಿಗೀಡಾಗಿದ್ದಾಳೆ.
ವಧುವಿನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಶನಿವಾರ ನೆರವೇರಿಸಿದ್ದಾರೆ. ಇದಿಷ್ಟು ಘಟನೆಯ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಪ್ರಕರಣದಲ್ಲಿ ಯಾವುದೇ ವಿಚಾರಣೆಯನ್ನು ಬಯಸುವುದಿಲ್ಲ ಎಂದು ಶಿವಾಂಗಿ ಕುಟುಂಬ ತಿಳಿಸಿವೆ. ಘಟನೆಯ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಂಡಿದ್ದು, ನಂತರ ಪೊಲೀಸರ ತಂಡವೊಂದು ಭಡ್ವಾನಾ ಗ್ರಾಮಕ್ಕೆ ವಿಚಾರಣೆಗೆಂದು ಕಳುಹಿಸಲಾಯಿತು ಎಂದು ಮಲಿಹಾಬಾದ್ ಎಸ್ಎಚ್ಒ ಸುಭಾಸ್ ಚಂದ್ರ ಸರೋಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)
ಒಂದೇ ಹುಡುಗನನ್ನು ಮದುವೆಯಾದ ಅವಳಿ ಸಹೋದರಿಯರು! ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ
ಜೀನಿಯಸ್ ಮಾತ್ರ 10 ಸೆಕೆಂಡ್ನಲ್ಲಿ ಈ ಫೋಟೋದಲ್ಲಿರುವ ಹಂದಿಯನ್ನು ಗುರುತಿಸಲು ಸಾಧ್ಯ!
ಪ್ರೀತಿಸಿ ಮದುವೆಯಾಗಿ ಒಟ್ಟಿಗೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ದಂಪತಿ ಬಂಧನ