ತಿರುಪತಿ: ಜಗತ್ಪ್ರಸಿದ್ಧ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಭಕ್ತರಿಗಾಗಿ ಜೂನ್ 11ರಿಂದ ಬಾಗಿಲು ತೆರೆಯಲಿದೆ. ಆದರೆ ದೇವರ ದರ್ಶನಕ್ಕೆ ಭಕ್ತರ ಸಂಖ್ಯೆಯನ್ನು ದಿನಕ್ಕೆ 6,000 ಮಿತಿಗೆ ಸೀಮಿತಗೊಳಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸುಲಭವಾಗಿ ಸಿಗಲ್ಲ ದರ್ಶನ
ಕೋವಿಡ್ 19 ನಿಯಮಗಳ ಪ್ರಕಾರ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ದೇವಸ್ಥಾನಕ್ಕೆ ನಿರಾಕರಿಸಲಾಗುತ್ತಿದೆ. ಟಿಟಿಡಿಯ ಎಲ್ಲ ಉದ್ಯೋಗಿಗಳು ಪಿಪಿಇ ಕಿಟ್ ಧರಿಸಿಯೇ ಭಕ್ತರ ಸರದಿಯನ್ನು ನಿರ್ವಹಿಸಲಿದ್ದಾರೆ ಮತ್ತು ಅವರ ಬೇಕು ಬೇಡಗಳನ್ನು ಗಮನಿಸಲಿದ್ದಾರೆ. ದರ್ಶನ ಬಯಸುವ ಭಕ್ತರ ಟ್ರಾವೆಲ್ ಹಿಸ್ಟರಿ ಗಮನಿಸಿದ ಬಳಿಕವೇ ಅವರಿಗೆ ಅನುಮತಿ ನೀಡಲಾಗುತ್ತದೆ. ಒಟ್ಟಾರೆಯಾಗಿ ಆಯ್ದ ಕೆಲವರನ್ನು ಕೋವಿಡ್ 19 ಸ್ಕ್ರೀನಿಂಗ್ಗೆ ಒಳಪಡಿಸಲಾಗುತ್ತದೆ. ಜ್ವರದ ಲಕ್ಷಣಗಳು ಕಂಡುಬಂದರೆ ಅಂಥವರನ್ನು ಕೂಡಲೇ ಕ್ವಾರಂಟೈನ್ಗೆ ಕಳುಹಿಸಲಾಗುತ್ತದೆ.
ಸಾಧಾರಣ ದಿನಗಳಲ್ಲಾದರೆ ತಿರುಪತಿಯಲ್ಲಿ ದಿನವೊಂದರ 60,000 ಭಕ್ತರು ದೇವರ ದರ್ಶನ ಪಡೆಯುತ್ತಿದ್ದರು. ಈಗ ಕೋವಿಡ್ 19 ಸೋಂಕಿನ ಕಾರಣ ಆರು ಅಡಿ ಅಂತರ ಕಾಯ್ದುಕೊಳ್ಳಬೇಕಾದ ಕಾರಣ ದಿನವೊಂದರ ಅವಧಿಯಲ್ಲಿ ದೇವರ ದರ್ಶನ ಪಡೆಯುವ ಭಕ್ತರ ಸಂಖ್ಯೆಯನ್ನು 6,000ಕ್ಕೆ ಸೀಮಿತಗೊಳಿಸಲಾಗಿದೆ. ದೇವರ ದರ್ಶನ ಪಡೆಯಬೇಕಾದರೆ ಆರು ಅಡಿ ಅಂತರ ಮಾತ್ರವಲ್ಲ, ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಫೀಸ್ ಕಟ್ಟಿದ್ದೀರಾ? ಇಲ್ಲವಾದರೆ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮಿಸ್ ಆಗಬಹುದು…!
ಭಕ್ತರ ಪ್ರವೇಶಕ್ಕೆ ನಿರ್ಬಂಧ ಮಾರ್ಚ್ 20ರಂದು ಜಾರಿಗೆ ಬಂದಿದ್ದು, ಜೂನ್ 11ಕ್ಕೆ ಇದು ಅಂತ್ಯಗೊಳ್ಳಲಿದೆ. ಜೂನ್ 11ರಿಂದಲೇ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು 13 ಗಂಟೆ ಕಾಲ ದರ್ಶನ ಭಾಗ್ಯ ಲಭಿಸಲಿದೆ. ಗಂಟೆಗೆ 500 ಭಕ್ತರಿಗೆ ದೇವರ ದರ್ಶನ ಒದಗಿಸುವ ಪ್ರಯತ್ನ ನಡೆದಿದೆ ಎಂದು ಟಿಟಿಡಿ ಚೇರ್ಮನ್ ವೈ.ವಿ.ಸುಬ್ಬಾ ರೆಡ್ಡಿ, ಎಕ್ಸಿಕ್ಯೂಟಿವ್ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಅಡಿಷನಲ್ ಎಕ್ಸಿಕ್ಯೂಟಿವ್ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದು ಚಂದ್ರ ಗ್ರಹಣ: ಎಷ್ಟೊತ್ತಿಗೆ, ಎಲ್ಲೆಲ್ಲಿ ಗೋಚರ… ಇಲ್ಲಿದೆ ವಿವರ
ವಿಶೇಷ ದರ್ಶನ 3,000 ಟಿಕೆಟ್ ಗಳು ಆನ್ಲೈನ್ನಲ್ಲಿ ಲಭ್ಯವಿದ್ದು ಪ್ರತಿ ಟಿಕೆಟ್ಗೆ 300 ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನುಳಿದ 3,000 ಕೋಟಾದಲ್ಲಿ ಉಚಿತ ದರ್ಶನ ಮತ್ತು ಬೆಟ್ಟ ಹತ್ತಿ ಬರುವವರಿಗೆ ಮೀಸಲಿರಿಸಲಾಗಿದೆ. ಉಚಿತ ದರ್ಶನಕ್ಕೂ ಮುಂಗಡ ಕಾಯ್ದಿರಿಸುವಿಕೆ ವ್ಯವಸ್ಥೆ ಹಿಂದಿನಂತೆಯೇ ಚಾಲ್ತಿಯಲ್ಲಿ ಇರಲಿದೆ. ಆನ್ಲೈನ್ ಟಿಕೆಟ್ ಮಾರಾಟ ಜೂನ್ 8 ರಿಂದ ಶುರುವಾಗಲಿದೆ. ಹೊಸ ವ್ಯವಸ್ಥೆಯ ಪರಿಶೀಲನೆ ಜೂನ್ 8 ರಿಂದ ಆರಂಭವಾಗಲಿದ್ದು ಇದರಲ್ಲಿ ಸ್ಥಳೀಯರು ಮತ್ತು ಟಿಟಿಡಿಯ ಉದ್ಯೋಗಿಗಳು ಭಾಗಿಯಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ಶಾಲೆ ಆರಂಭವಾಗಬೇಕೋ? ಬೇಡವೋ? -ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ನೇರ ಉತ್ತರ ಹೀಗಿದೆ…