ತಿರುಪತಿ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಆಂಧ್ರ ಪ್ರದೇಶ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಹೊಸ ಕಾರು ಖರೀದಿ ಮಾಡಬೇಕು ಎಂಬುದು ಅನೇಕರ ಜೀವನದ ಗುರಿಯಾಗಿರುತ್ತದೆ. ಅದಕ್ಕಾಗಿ ಹಗಲಿರುಳು ಶ್ರಮಿಸಿದರೂ ಜೀವನದಲ್ಲಿನ ಕೆಲವು ಬದ್ಧತೆಗಳಿಂದ ಬಹುತೇಕರಿಗೆ ಕಾರು ಖರೀದಿ ಸಾಧ್ಯವಾಗುವುದಿಲ್ಲ. ಮಧ್ಯಮ ವರ್ಗದ ಜನರ ಪಾಲಿಗಂತೂ ಕಾರು ಕೈಗೆಟುಕದ ದ್ರಾಕ್ಷಿ ಎಂದೇ ಹೇಳಬಹುದು. ಹೀಗಿರುವಾಗ ವ್ಯಕ್ತಿಯೊಬ್ಬ ಕೇವಲ 279 ರೂಪಾಯಿ ಮೌಲ್ಯದ ಬಿರಿಯಾನಿ ತಿಂದು ಬಹುಮಾನವಾಗಿ 7 ಲಕ್ಷ ರೂ. ಮೌಲ್ಯದ ಕಾರನ್ನು ಬಹುಮಾನವಾಗಿ ಗೆದ್ದಿದ್ದಾನೆ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಅಚ್ಚರಿ ಎನಿಸಿದರೂ ಇದೇ ಸತ್ಯ.
ತಿರುಪತಿಯ ರೆಸ್ಟೋರೆಂಟ್ ಒಂದು ಇಂಥಾ ಬಂಪರ್ ಗಿಫ್ಟ್ ಅನ್ನು ನೀಡಿದೆ. ತಿರುಪತಿಯಲ್ಲಿ ರೋಬೋ ಹೆಸರಿನ ಹೋಟೆಲ್ ಇದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೊಸ ನೋಟಿಫಿಕೇಶನ್ ಒಂದನ್ನು ಈ ಹೋಟೆಲ್ ಹೊರಡಿಸಿತ್ತು. ಹೋಟೆಲ್ನಲ್ಲಿ ಬಿರಿಯಾನಿ ತಿನ್ನುವವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಮತ್ತು ಗೆದ್ದವರಿಗೆ ಕಾರನ್ನು ಗಿಫ್ಟ್ ಆಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಅಂದಿನಿಂದ ಸಾಕಷ್ಟು ಮಂದಿ ಪ್ರತಿದಿನ ಹೋಟೆಲ್ ಬಂದು ಬಿರಿಯಾನಿ ಸೇವಿಸುತ್ತಿದ್ದರು.
ಹೋಟೆಲ್ ಮೂಲಗಳ ಪ್ರಕಾರ ಘೋಷಣೆ ಮಾಡಿದಾಗಿನಿಂದ ಸುಮಾರು 23 ಸಾವಿರ ಮಂದಿ 279 ರೂ. ಕೊಟ್ಟು ಟೋಕನ್ ಪಡೆದು ಬಿರಿಯಾನಿ ಸವಿದಿದ್ದಾರೆ. ಹೊಸ ವರ್ಷದ ಹಿಂದಿನ ದಿನ ಲಾಟರಿಯಲ್ಲಿ ಆಯ್ಕೆಯಾದ ವ್ಯಕ್ತಿಗೆ 7 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ರೆಸ್ಟೋರೆಂಟ್ ತಿಳಿಸಿತ್ತು. ಅದೇ ರೀತಿ ಹೊಸ ವರ್ಷದ ಹಿಂದಿನ ದಿನ ರೆಸ್ಟೊರೆಂಟ್ನಲ್ಲಿ ಬಹುದೊಡ್ಡ ಕಾರ್ಯಕ್ರಮ ನಡೆಸಲಾಯಿತು. ಕಾರ್ಯನಿರ್ವಾಹಕ ಭರತ್ ಕುಮಾರ್ ಮತ್ತು ಅವರ ಪತ್ನಿ ನೀಲಿಮಾ ಅವರು 23 ಸಾವಿರ ಜನರಲ್ಲಿ ಒಬ್ಬ ವ್ಯಕ್ತಿಯನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದರು.
ತಿರುಪತಿ ಮೂಲದ ರಾಹುಲ್ ಎಂಬುವರ ಟೋಕನ್ ಬಹುಮಾನಕ್ಕೆ ಆಯ್ಕೆಯಾಯಿತು. ಈ ಮಾಹಿತಿಯನ್ನು ರಾಹುಲ್ ಅವರಿಗೆ ತಿಳಿಸಿ, ಅವರನ್ನು ಬರಮಾಡಿಕೊಂಡು 7 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಹಸ್ತಾಂತರಿಸಲಾಗಿದೆ. ಬಿರಿಯಾನಿ ತಿಂದಿದ್ದಕ್ಕೆ ಇಷ್ಟೊಂದು ದೊಡ್ಡ ಉಡುಗೊರೆ ಸಿಗುತ್ತದೆ ಅಂತ ಕನಸು-ಮನಸ್ಸಲ್ಲೂ ನೆನಸಿರಲಿಲ್ಲ ಎನ್ನುತ್ತಾರೆ ರಾಹುಲ್. ಬಿರಿಯಾನಿಗೆ ಕಾರನ್ನು ಉಡುಗೊರೆಯಾಗಿ ನೀಡುವ ವಿನೂತನ ಯೋಜನೆಯಿಂದಾಗಿ ನಮ್ಮ ರೆಸ್ಟೋರೆಂಟ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರೆಸ್ಟೋರೆಂಟ್ ಆಡಳಿತ ಮಂಡಳಿ ತಿಳಿಸಿದೆ. (ಏಜೆನ್ಸೀಸ್)
1 + 1 = 3 ಎಂದ ನಟಿ ಅಮಲಾ ಪೌಲ್! ಅಭಿಮಾನಿಗಳಿಂದ ಹರಿದುಬಂತು ಅಭಿನಂದನೆಗಳ ಮಹಾಪೂರ
ತಿರುಪತಿಯಲ್ಲಿ ಲಡ್ಡು ಪ್ರಸಾದ, ಆದ್ರೆ ಅಯೋಧ್ಯೆ ಶ್ರೀರಾಮನ ಭಕ್ತರಿಗೆ ಏನನ್ನು ನೀಡಲಿದ್ದಾರೆ ಗೊತ್ತಾ..?