ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ತಂದಿದ್ದ ಲಾಕ್ಡೌನ್ ನಿಯಮಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಷ್ಟು ಸಡಿಲಗೊಳಿಸಿ ಕೆಲವು ಚಟುವಟಿಕೆಗಳಿಗೆ ಅನುಮತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಕೆಲವು ಚಟುವಟಿಕೆಗಳಿಗೆ ಅನುಮತಿ ನೀಡಿದರು.
ಕಂಟೈನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಾಗಿ ಲಾಕ್ಡೌನ್ ಕ್ರಮ ಜಾರಿಗೊಳಿಸುವಂತೆ ಅವರು ಅಧಿಕಾರಿಗಳಿಗೆ ಇದೆ ವೇಳೆ ಸೂಚಿಸಿದರು.
ಯಾವುದಕ್ಕೆ ಅನುಮತಿ: ಖಾಸಗಿ ಬಸ್ ಸಂಚಾರ, ರಾಜ್ಯದೊಳಗೆ ರೈಲು ಓಡಾಟ, ಪಾರ್ಕ್ ಗಳಲ್ಲಿ ಬೆಳಗ್ಗೆ 7 ರಿಂದ 9 ಸಂಜೆ 5 ರಿಂದ 7 ಗಂಟೆ ಅವಧಿಯಲ್ಲಿ ವಾಯುವಿಹಾರ. ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ಕೂಡ ತೆರೆದಿರುತ್ತವೆ. ಕ್ರೀಡಾ ಚಟುವಟಿಕೆಗೆ ಅವಕಾಶ, ವಿವಾಹಗಳಿಗೆ ಷರತ್ತು ಬದ್ಧ ಅನುಮತಿ, ಬೀದಿ ಬದಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ ಮದ್ಯ ನಿಷೇಧ ಆಂದೋಲನ ಪದಾಧಿಕಾರಿಗಳಿಂದ ಸಿಎಂಗೆ ಮನಿ ಆರ್ಡರ್: ಮದ್ಯ ಮಾರಾಟಕ್ಕೆ ಆಕ್ರೋಶ
ಯಾವುದಕ್ಕೆ ಅನುಮತಿ ಇಲ್ಲ: ಮಾಲ್, ಸಿನಿಮಾ, ಜಿಮ್, ಮೆಟ್ರೋ ರೈಲು, ಎಸಿ ಬಸ್ ಸಂಚಾರಕ್ಕೆ ಮೇ 31ರವರೆಗೆ ಅವಕಾಶ ಇಲ್ಲ.
ಹೊರ ರಾಜ್ಯಗಳಿಂದ ಬಂದವರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ. ಎಲ್ಲರಿಗೂ ಮಾಸ್ಕ್ ಕಡ್ಡಾಯ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವಂತೆ ಸಿಎಂ ಪೊಲೀಸರಿಗೆ ಸೂಚಿಸಿದ್ದಾರೆ.
ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್: ಸರ್ಕಾರ ಲಾಕ್ಡೌನ್ ನಿಯಮ ಸಡಿಲಗೊಳಿಸಿದ್ದರೂ ಇನ್ನು ಮುಂದೆ ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್ ನಿಯಮ ಜಾರಿಯಲ್ಲಿರುತ್ತದೆ. ಅಂದು ಯಾವುದೇ ಅಂಗಡಿಗಳು ತೆರೆಯುವುದಿಲ್ಲ. ಬಸ್ ಸಂಚಾರ ಇರುವುದಿಲ್ಲ. ಎಲ್ಲರೂ ಮನೆಯಲ್ಲಿ ಇರಬೇಕು ಎಂದು ಸೂಚಿಸಲಾಗಿದೆ.