ಬೆಂಗಳೂರು: ‘ಭಾರತ್ ಜೋಡೋ’ ಯಾತ್ರೆಯ ಪ್ರಚಾರಾರ್ಥ ವಿಡಿಯೋದಲ್ಲಿ ‘ಕೆಜಿಎಫ್ ಚಾಪ್ಟರ್-2’ ಹಾಡನ್ನು ಬಳಸಿ ಕಾಪಿರೈಟ್ ಉಲ್ಲಂಘನೆ ಕೇಸ್ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತಿತರರಿಗೆ ಸದ್ಯ ನಿರಾಳ ಎಂಬಂತಾಗಿದೆ.
‘ಎಂಆರ್ಟಿ ಮ್ಯೂಸಿಕ್’ ಸಂಸ್ಥೆ ದಾಖಲಿಸಿರುವ ಪ್ರಕರಣ ಸಂಬಂಧ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇತ್ ವಿರುದ್ಧ ದಾಖಲಾಗಿರುವ ಎಫ್ಐಆರ್ ತನಿಖೆ ಮುಂದಿನ ವಿಚಾರಣಾ ದಿನಾಂಕದವರೆಗೆ ತಡೆ ಹಿಡಿಯುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಸುನೀಲ್ದತ್ ಯಾದವ್ ಅವರ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿರುವಂತೆ ಈ ಹಾಡನ್ನು ಒಳಗೊಂಡ ವೀಡಿಯೊಗಳನ್ನು ಕಾಂಗ್ರೆಸ್ನ ಎಲ್ಲ ಅಧಿಕೃತ ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಲಾಗಿದೆ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಮಂಡಿಸಿದ್ದ ವಾದವನ್ನು ಆಲಿಸಿದ ಬಳಿಕ ಅವರು ಈ ಆದೇಶವನ್ನು ಹೊರಡಿಸಿದರು.
ವಿಡಿಯೋದಲ್ಲಿ ರಾಹುಲ್ ಗಾಂಧಿ ಮುಖ ಕಾಣಿಸಿಕೊಂಡಿದೆ ಎಂದ ಮಾತ್ರಕ್ಕೆ ಅವರನ್ನು ಆರೋಪಿಯನ್ನಾಗಿಸಲು ಸಾಧ್ಯವಿಲ್ಲ. ಅಲ್ಲದೆ ಎಫ್ಐಆರ್ ದಾಖಲಿಸುವಂಥ ಯಾವುದೇ ಸಂಜ್ಞೇಯ ಅಪರಾಧ ಎಸಗಿಲ್ಲ ಎಂದು ಪೊನ್ನಣ್ಣ ವಾದಿಸಿದರು. ಅಲ್ಲದೆ ಯಾವುದೇ ಪ್ರಾಥಮಿಕ ವಿಚಾರಣೆ ನಡೆಸದೆ, ವಕೀಲರು ದೂರು ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು ಎಂಬುದನ್ನೂ ಪೀಠದ ಗಮನಕ್ಕೆ ತಂದರು.
ರಸ್ತೆ ಸಂಪರ್ಕ ಇಲ್ಲದ್ದರಿಂದ ರೋಗಿಯನ್ನು 5 ಕಿ.ಮೀ. ದೂರ ಹೊತ್ತುಕೊಂಡು ಆಸ್ಪತ್ರೆಗೆ ಹೋದ ಕುಟುಂಬಸ್ಥರು!
ಸಾರ್ವಜನಿಕರಿಗೆ ಸ್ಪಂದಿಸದ ಪೊಲೀಸರಿಂದ ತೊಂದರೆ; ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು