ಮುಂಬೈ: ಓದುವ ಹವ್ಯಾಸವನ್ನು ಚಿಕ್ಕಂದಿನಲ್ಲಿಯೇ ರೂಢಿಸಿಕೊಳ್ಳಬೇಕು. ಆಗ ಮಾತ್ರ ಅದನ್ನು ಮುಂದುವರಿಸುವುದಕ್ಕೆ ಸಾಧ್ಯವಾಗುತ್ತದೆ. ಕತೆ-ಕಾದಂಬರಿಗಳನ್ನು ಓದಿದಾಗ ಸಿಗುವಂಥ ಅನುಭವ ಇತರರೊಂದಿಗೆ ಹಂಚಿಕೊಂಡಾಗ ನಮಗಾಗುವ ಆನಂದ ಇನ್ನೂ ಹೆಚ್ಚು ಎಂದು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಾಹಿತ್ಯ ಸಂಭ್ರಮದ ವಿದ್ಯಾರ್ಥಿ ಸಮ್ಮೇಳನಾಧ್ಯಕ್ಷೆ ಡಾ. ರಮಾದೇವಿ ಉಡುಪ ಹೇಳಿದರು.
ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಮುಂಬೈನ ಮೈಸೂರು ಅಸೋಸಿಯೇಷನ್ ಜಂಟಿಯಾಗಿ ಹಮ್ಮಿಕೊಂಡಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬಯಿ ವಿಶ್ವವಿದ್ಯಾಲಯಕ್ಕೆ ಸೇರಿದ ಮೇಲೆ ನನಗೆ ಸಾಹಿತ್ಯದ ವಿವಿಧ ಘಟ್ಟಗಳ ಪರಿಚಯವಾಯಿತು. ಇಲ್ಲಿನ ಕನ್ನಡ ವಿಭಾಗ ನಿಜಕ್ಕೂ ಸರಸ್ವತಿ ಭಂಡಾರ. ಓದುವವರಿಗೆ ಒಂದೊಳ್ಳೆಯ ಅವಕಾಶ. ಬರೆಯುವುದರ ಜೊತೆಗೆ ಒಳ್ಳೆಯ ಓದು ಇದ್ದರೆ ಅದು ನಮ್ಮ ಅನುಭವವನ್ನು ಬರವಣಿಗೆ ರೂಪಕ್ಕೆ ಇಳಿಸಲಿಕ್ಕೆ ತುಂಬ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂಬೈನ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಭಾಕರ ದೇವಾಡಿಗ ಅವರು ಯಕ್ಷಗಾನ ಭಾಗವತಿಕೆ ನಡೆಸಿಕೊಟ್ಟರು. ಶೈಲಜಾ ಹೆಗಡೆ ಕುಮಾರವ್ಯಾಸನ ಕಥಾಮಂಜರಿಯ ಆಯ್ದ ಭಾಗಗಳನ್ನು ಸುಶ್ರಾವ್ಯವಾಗಿ ಸಾದರಪಡಿಸಿದರು. ಅನಿತಾ ಪಿ. ತಾಕೊಡೆ ಕವಿಸಮಯದಲ್ಲಿ “ಅಡುಗೆಮನೆಯೂ ಬದಲಾಗಿದೆ ಮತ್ತು ಸುಮ್ಮನೆ ನಗುತ್ತೇನೆ” ಎಂಬ ಎರಡು ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಎರಡನೆಯ ಹಂತದಲ್ಲಿ ಪಾರ್ವತಿ ಪೂಜಾರಿ ಅವರು ಬರೆದು ಪ್ರಕಟಿಸಿರುವ “ಕೊಲ್ಯಾರು ರಾಜುಶೆಟ್ಟಿ ಅವರ ಬದುಕು ಬರಹ” ಚೊಚ್ಚಲ ಕೃತಿಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್. ಉಪಾಧ್ಯ ಅವರು ಬಿಡುಗಡೆಗೊಳಿಸಿದರು. ಈ ಕೃತಿಯ ಪರಿಚಯವನ್ನು ಸವಿತಾ ಅರುಣ್ ಶೆಟ್ಟಿ ಮಾಡಿದರು. ಪಾರ್ವತಿ ಪೂಜಾರಿಯವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಇದನ್ನೂ ಓದಿ: ಸರ್ಕಾರಿ ಕಚೇರಿಯಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ; ‘ನೀನು ಎಲ್ಲಿಗೆ ಹೋದ್ರೂ ಬಿಡಲ್ಲ’ ಎಂದಿದ್ದ ಆರ್ಟಿಐ ಕಾರ್ಯಕರ್ತನ ಬಂಧನ
ಇದೇ ಸಂದರ್ಭದಲ್ಲಿ ಜ್ಯೋತಿ ಶೆಟ್ಟಿ ಅವರು, ‘ಯಕ್ಕಾರಿನ ಯಕ್ಷಮಣಿ ದಯಾಮಣಿ’ ಎಂಬ ತಮ್ಮ ಚೊಚ್ಚಲ ಕೃತಿಯ ಕುರಿತು ಅನುಭವಗಳನ್ನು ಹಂಚಿಕೊಂಡರು. ಗಣ್ಯರ ಸಮ್ಮುಖದಲ್ಲಿ ಪಾರ್ವತಿ ಸುಧಾಕರ ಪೂಜಾರಿ ದಂಪತಿ ಡಾ.ಜಿ.ಎನ್. ಉಪಾಧ್ಯ ಹಾಗೂ ಕೊಲ್ಯಾರು ರಾಜು ಶೆಟ್ಟಿ ಅವರನ್ನು ಗೌರವಿಸಿದರು. ಪಾರ್ವತಿ ಪೂಜಾರಿಯವರನ್ನು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವತಿಯಿಂದ ಗೌರವಿಸಲಾಯಿತು.
ಮೂರನೆಯ ಹಂತದ ವಿಶೇಷ ಉಪನ್ಯಾಸ ಗೋಷ್ಠಿಯಲ್ಲಿ ‘ಪರ್ವ ಆಯಾಮ ಅನನ್ಯತೆ’ಯ ಕುರಿತು ಡಾ.ಉಮಾ ರಾವ್, ಜಯಂತ್ ಕಾಯ್ಕಿಣಿ ಪ್ರಬಂಧ ಲೋಕ ಕುರಿತು ಕಲಾ ಭಾಗ್ವತ್, ಕನ್ನಡ ರಂಗಭೂಮಿಗೆ ಡಾ. ಮಂಜುನಾಥ ಅವರ ಕೊಡುಗೆ ಕುರಿತು ರುದ್ರಮೂರ್ತಿ ಪ್ರಭು ಅವರು ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದ ವಿಶೇಷ ಭಾಗವಾಗಿ ಕಲಾವಿದರಾದ ನಳಿನಾ ಪ್ರಸಾದ್ ಅವರು ಡಾ. ಜನಾರ್ದನ ಭಟ್ ಅನುವಾದಿಸಿರುವ ಟಾಲ್ಸ್ಟಾಯ್ನ ಐದು ಸಣ್ಣಕತೆಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದ ಸೂರಪ್ಪ ಕುಂದರ್ ಜಾದೂ ಪ್ರದರ್ಶನ ನಡೆಸಿಕೊಟ್ಟರು. ವಿಭಾಗದ ವಿದ್ಯಾರ್ಥಿಗಳಾದ ಪ್ರಸಿದ್ಧ ಕಲಾವಿದ ಜಯ ಸಾಲ್ಯಾನ್, ಲಕ್ಷ್ಮಿ ರಾಥೊಡ್, ಪ್ರತಿಭಾ ರಾವ್ ಹಾಗೂ ಕೃತಿ ಚಡಗ ಅವರ ಚಿತ್ರಕಲೆಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಅವರನ್ನು ವಿಭಾಗದ ವತಿಯಿಂದ ಗೌರವಿಸಲಾಯಿತು.
ಮುಂಬೈ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ದುರ್ಗಪ್ಪ ಕೋಟಿಯವರ್ ಹಾಗೂ ಎಂ.ಫಿಲ್ ಪದವಿ ಪಡೆದ ಕುಮುದಾ ಆಳ್ವ ಅವರನ್ನು ಮುಂಬೈ ವಿಶ್ವವಿದ್ಯಾಲಯದ ಪರವಾಗಿ ಈ ಸಮಾರಂಭದಲ್ಲಿ ಗೌರವಿಸಲಾಯಿತು. ಮೈಸೂರು ಅಸೋಸಿಯೇಷನ್ನ ಕಾರ್ಯದರ್ಶಿ ಗಣಪತಿ ಶಂಕರಲಿಂಗ ಅವರು ವಿಭಾಗದ ಸಾಧನೆಯನ್ನು ಪ್ರಶಂಸಿದರು.
ಇದನ್ನೂ ಓದಿ: ಮುಖ್ಯಮಂತ್ರಿಗೇ ಶಾಪ ಹಾಕಿದ ಸ್ವಾಮೀಜಿ: ಒಂದೇ ತಿಂಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರಂತೆ ಬೊಮ್ಮಾಯಿ!
ಡಾ.ಜಿ.ಎನ್.ಉಪಾಧ್ಯ ಅವರು ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ವಿಭಾಗ ಕೇವಲ ಕ್ಯಾಂಪಸ್ಗೆ ಸೀಮಿತವಾದ ವಿಭಾಗವಲ್ಲ. ಇಪ್ಪತ್ತು ಲಕ್ಷ ತುಳು-ಕನ್ನಡಿಗರ ಮುಖವಾಣಿಯಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು. ಸಾಹಿತ್ಯ, ಸಂಸ್ಕೃತಿ, ಪರಂಪರೆ, ಇತಿಹಾಸ ಇದನ್ನು ಉಳಿಸಿ ಬೆಳೆಸುವ ಹಿರಿಯ ಕನ್ನಡಿಗರ ಕೆಲಸಗಳಿಗೆ ನಾವಿಂದು ಮಾದರಿಯಾಗಿ ಕೆಲಸವನ್ನು ಮಾಡಬೇಕು. ವಿಶ್ವವಿದ್ಯಾಲಯ ಎಂದರೆ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಬೆಳೆದರೆ ವಿಶ್ವವಿದ್ಯಾಲಯ ಬೆಳೆಯುತ್ತದೆ. ವಿಭಾಗ ಬೆಳೆಯುತ್ತದೆ ಎಂದು ನುಡಿದರು.
ಐದು ಹಂತದಲ್ಲಿ ನಡೆದ ಗೋಷ್ಠಿಯನ್ನು ನಳಿನಾ ಪ್ರಸಾದ್, ಪ್ರತಿಭಾ ರಾವ್, ಅನಿತಾ ಪಿ. ತಾಕೊಡೆ, ಹರೀಶ್ ಪೂಜಾರಿ, ಕಲಾ ಭಾಗ್ವತ್ ನಿರೂಪಿಸಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟಂಥ ಈ ಒಂದು ವಿಶಿಷ್ಟ ಸಾಹಿತ್ಯ ಸಮ್ಮೇಳನದಲ್ಲಿ ಕೆ. ಕಮಲಾ, ಮಧುಸೂಧನ್, ದಾಕ್ಷಾಯಿಣಿ ಎಡಹಳ್ಳಿ, ನಿತ್ಯಾನಂದ ಕೋಟ್ಯಾನ್, ಡಾ. ಈಶ್ವರ್ ಅಲೆವೂರು, ರಂಗ ಎಸ್. ಪೂಜಾರಿ, ಮೋಹನ್ ಮಾರ್ನಾಡ್, ವಿವೇಕ್ ಶಾನ್ಭಾಗ್, ಡಾ. ಭರತ್ ಕುಮಾರ್ ಪೊಲಿಪು, ಮನೋಹರ್ ತೋನ್ಸೆ, ಎನ್.ಟಿ ಪೂಜಾರಿ, ನಾರಾಯಣ ನವಿಲೇಕರ್, ಲತಾ ಸಂತೋಷ್ ಶೆಟ್ಟಿ, ಸವಿತಾ ಶೆಟ್ಟಿ, ಪದ್ಮನಾಭ ಶೆಟ್ಟಿ, ಕೆ.ಎಂ. ಕೋಟ್ಯಾನ್, ಸಾದಯಾ ಉಪಸ್ಥಿತರಿದ್ದರು.
ಮೂರು ವರ್ಷದ ಅವಳಿ ಮಕ್ಕಳ ಸಾವಿನ ಬೆನ್ನಿಗೆ ತಾಯಿಯೂ ನಿಧನ; ತಂದೆ ಇನ್ನೂ ಆಸ್ಪತ್ರೆಯಲ್ಲಿ…