ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ‘ಅಕ್ಬರ್’ ಮತ್ತು ‘ಸೀತಾ’ ಎಂಬ ಸಿಂಹದ ಜೋಡಿಗೆ ಹೊಸದಾಗಿ ಹೆಸರು ಹಾಗೂ ಅಕ್ಬರ್ ಹಾಗೂ ಸೀತಾ ಎನ್ನುವ ಹೆಸರಿನ ಸಿಂಹದ ಜೋಡಿಯನ್ನು ಒಟ್ಟಿಗೆ ಬಿಟ್ಟಿರುವುದಕ್ಕೆ ವಿಶ್ವ ಹಿಂದೂಪರಿಷತ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಚಳಿಗಾಲದಲ್ಲಿ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದೇ?
ಈ ಜೋಡಿಯನ್ನು ಒಂದೇ ಕಡೆ ಇಟ್ಟಿರುವುದನ್ನು ಪ್ರಶ್ನಿಸಿ ವಿಶ್ವ ಹಿಂದೂ ಪರಿಷತ್ ಕೋಲ್ಕತಾ ನ್ಯಾಯಾಲಯದ ಮೊರೆ ಹೋಗಿದೆ. ಈ ಕುರಿತು ಅರ್ಜಿ ವಿಚಾರಣೆಗೆ ಎತ್ತಿಕೊಂಡು ನ್ಯಾಯಾಲಯ ಪೀಠವು ವಿಚಾರಣೆಯನ್ನು ಫೆ.20ಕ್ಕೆ ಮುಂದೂಡಿದೆ.
ಪಶ್ಚಿಮ ಬಂಗಾಲ ರಾಜ್ಯದ ಅರಣ್ಯ ಇಲಾಖೆಯು ಹಲವಾರು ವರ್ಷಗಳಿಂದ ಪ್ರವಾಸಿ ತಾಣವಾದ ಸಿಲಿಗುರಿಯಲ್ಲಿ ವನ್ಯಜೀವಿಗಳ ಸಫಾರಿ ಪಾರ್ಕ್ ಹೊಂದಿದೆ. ಇಲ್ಲಿ ಆನೆ, ಸಿಂಹ, ಹುಲಿ ಸಹಿತ ಪ್ರಮುಖ ಪ್ರಾಣಿಗಳಿವೆ. ಬನ್ನೇರಘಟ್ಟ ಮಾದರಿಯಲ್ಲಿಯೇ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಇದೆ. ಇಲ್ಲಿಗೆ ನಿತ್ಯ ಸಹಸ್ರಾರು ಪ್ರವಾಸಿಗರು ಬಂದು ವನ್ಯಜೀವಿಗಳನ್ನು ಹತ್ತಿರದಿಂದಲೇ ನೋಡಿ ಖುಷಿಪಟ್ಟು ಹೋಗುತ್ತಾರೆ.
2016ರಲ್ಲಿ ಜನಿಸಿದ ಮೂರು ಮಕ್ಕಳ ಪೈಕಿ ‘ಅಕ್ಬರ್’ ಎಂಬ ಸಿಂಹವನ್ನು ಮಾತ್ರ ಸಫಾರಿ ಪಾರ್ಕ್ಗೆ ಸ್ಥಳಾಂತರ ಮಾಡಲಾಗಿದೆ. ತ್ರಿಪುರಾ ಮೃಗಾಲಯದಲ್ಲಿ 2018ರಲ್ಲಿ ‘ಸೀತಾ’ ಸಿಂಹಿಣಿಗೆ ಈಗ ಐದು ವರ್ಷ. ಈ ಎರಡೂ ಸಹ ಸದ್ಯಕ್ಕೆ ಬೆಂಗಾಲ್ ಸಫಾರಿ ಪಾರ್ಕ್ನಲ್ಲಿ ಪ್ರಮುಖ ಆಕರ್ಷಣೆಯಾಗಿವೆ. ರಾಯಲ್ ಬೆಂಗಾಲ್, ಘೇಂಡಾಮೃಗಗಳು, ಆನೆಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ವೀಕ್ಷಿಸಲು ಪ್ರವಾಸಿಗರು ವರ್ಷವಿಡೀ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಇದರಲ್ಲಿ ಅಕ್ಬರ್ ಹಾಗೂ ಸೀತಾ ಎನ್ನುವ ಸಿಂಹಗಳು ಸಫಾರಿ ಪಾರ್ಕ್ನಲ್ಲಿ ಬಿಡಲಾಗಿತ್ತು. ಇವರೆಡನ್ನೂ ಜೋಡಿಯಾಗಿ ಬಿಟ್ಟಿದ್ದನ್ನು ಕೆಲವರು ಗಮನಿಸಿದ್ದರು. ಇದು ಸ್ಥಳೀಯ ವಿಶ್ವ ಹಿಂದೂಪರಿಷತ್ ಪ್ರಮುಖರ ಗಮನಕ್ಕೂ ಬಂದಿತ್ತು. ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಿಂಹಗಳ ಹೆಸರನ್ನು ಬದಲಿಸಿ ಇಲ್ಲವೇ ಸಿಂಹಗಳನ್ನು ಒಂದೇ ಕಡೆ ಇರುವುದನ್ನು ತಪ್ಪಿಸಿ ಎಂದು ಮನವಿ ಸಲ್ಲಿಸಿದ್ದರು. ಆದರೆ ಈಗಾಗಲೇ ಸಿಂಹಗಳಿಗೆ ಹೆಸರು ಇಡಲಾಗಿದೆ. ಹೆಸರು ಬದಲಾಯಿಸಲು ಆಗುವುದಿಲ್ಲ. ಅವುಗಳನ್ನು ಸ್ಥಳಾಂತರಿಸುವ ವಿಷಯವೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉತ್ತರ ನೀಡಿದ್ದರು. ಅರಣ್ಯ ಇಲಾಖೆ ಕ್ರಮವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ರಾಜ್ಯ ವಿಎಚ್ಪಿ ಮುಖಂಡರು ಜಲಪಾಯ್ಗುರಿಯಲ್ಲಿರುವ ಕೋಲ್ಕತಾ ಹೈಕೋರ್ಟ್ನ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು.
ಇದು ಹಿಂದೂ ಭಾವನೆಗಳನ್ನು ಕೆರಳಿಸುವ ಕೆಲಸ. ಅಕ್ಬರ್ ಎನ್ನುವ ಸಿಂಹವನ್ನು ಸೀತಾ ಎನ್ನುವ ಸಿಂಹದ ಜತೆಗೆ ಇರಿಸುವುದು ಸರಿ ಕಾಣುತ್ತಿಲ್ಲ. ಕೂಡಲೇ ಹೆಸರು ಬದಲಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪಶ್ವಿಮಬಂಗಾಲದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಲಿಗುರಿ ಸಫಾರಿ ಪಾರ್ಕ್ ನಿರ್ದೇಶಕರನ್ನು ಪಾರ್ಟಿಗಳನ್ನಾಗಿ ಮಾಡಲಾಗಿದೆ.
ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಪೀಠದ ನ್ಯಾಯಮೂರ್ತಿ ಸೌಗತಾ ಭಟ್ಟಾಚಾರ್ಯ ಅವರು ಫೆಬ್ರವರಿ 20ರಂದು ವಿಚಾರಣೆ ನಡೆಸುವುದಾಗಿ ಮುಂದಕ್ಕೆ ಹಾಕಿದರು. ಈ ಕುರಿತು ವಾದಿಗಳು ಹಾಗೂ ಪ್ರತಿವಾದಿಗಳಿಗೆ ನೊಟೀಸ್ ಕೂಡ ಜಾರಿಗೊಳಿಸಲಾಗಿದೆ.
ಈ ಬಾರಿ ಈ ಜೋಡಿ ಸಿಂಹಗಳ ಸೇರ್ಪಡೆಯೊಂದಿಗೆ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದೂ ಅಂದಾಜಿಸಲಾಗಿದೆ. ಈ ಬೆಂಗಾಲ್ ಸಫಾರಿ ಪಾರ್ಕ್ನಲ್ಲಿ ಸಿಂಹಗಳಿಗೆ ವಿಶಿಷ್ಟವಾದ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯಲ್ಲಿ ಕಾಡಿನ ರಾಜನಿಗೆ ಸ್ನಾನ ಮಾಡಲು ಪ್ರತಿಕಾಲವೂ ನೀರು ಲಭ್ಯವಿರುತ್ತದೆ. ಪ್ರತಿದಿನ ಐದರಿಂದ ಏಳು ಕೆಜಿಯಷ್ಟು ಗೋಮಾಂಸವನ್ನೂ ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.