ಲಿಂಗಸುಗೂರು: ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ನಂದಿಹಳ್ಳಿಯಲ್ಲಿ ದಲಿತರ ಕೇರಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಶಂಶಾಲಮ್ಗೆ ಮಾದಿಗ ಮಹಾಸಭಾ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಮುಖರು ಸೋಮವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಮೇ 22ರಂದು ದಲಿತರ ಕೇರಿಗೆ ನುಗ್ಗಿ ಕಬ್ಬಿಣದ ರಾಡು, ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರ ಪೈಕಿ ಇಬ್ಬರು ಕೋಮಾ ಸ್ಥಿತಿಗೆ ತಲುಪಿ ಬಳ್ಳಾರಿ ಆಸ್ಪತ್ರೆಗೆ ಸೇರಿದ್ದಾರೆ. ಇನ್ನಿಬ್ಬರನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಒಟ್ಟು 69 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈವರೆಗೆ 16 ಜನರನ್ನು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರ ಬಂಧಿಸಿ ರೌಡಿಶೀಟರ್ ಪಟ್ಟಿಗೆ ಸೇರಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಕಾರಟಗಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದರೂ ದಲಿತರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ. ನಿರಂತರ ಹಲ್ಲೆಗಳು ನಡೆಯುತ್ತಿವೆ. ದಲಿತ ಕುಟುಂಬಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಹಲ್ಲೆಗೊಳಗಾದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಪ್ರಮುಖರಾದ ಹುಸೇನಪ್ಪ ದೊಡ್ಡಮನಿ, ಆಂಜನೇಯ ಭಂಡಾರಿ, ಹುಲಗಪ್ಪ ಕೆಸರಟ್ಟಿ, ರಮೇಶ ಗೋಸ್ಲೆ, ಅನಿಲ್ ಕುಮಾರ, ಚಂದ್ರಕಾಂತ, ಹುಲಗಪ್ಪ, ಬಸಪ್ಪ ಮಿಂಚೇರಿ, ಶರಣಬಸವ ಮಿಂಚೇರಿ, ದೇವೇಂದ್ರ ಕರಡಕಲ್, ಹುಲಗಪ್ಪ ಕುಣಿಕಲ್ಲೂರು, ದುರುಗಪ್ಪ ಡಬ್ಬೇರಮಡು, ಅಮರೇಶ ಗುಡಿಹಾಳ, ಬಸವರಾಜ ಕುಣಿಕಲ್ಲೂರು, ಹುಲಗಪ್ಪ ಜೂಲಗುಡ್ಡ, ಬಾಳಪ್ಪ ಗೊರೇಬಾಳ ಇದ್ದರು.