ಲಿಂಗಸುಗೂರು: ಜನಿಸುವ ಮುನ್ನ ಸಾವಿಗೀಡಾದ ಶಿಶುವನ್ನು ಪಾಲಕರೇ ಕಸದರಾಶಿಯಲ್ಲಿ ಶನಿವಾರ ಎಸೆದಿದ್ದು, ಅದನ್ನು ನಾಯಿ, ಹಂದಿಗಳು ಅರೆಬೆರೆಯಾಗಿ ತಿಂದು ಹಾಕಿವೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಕಾಳಾಪುರದ ಗರ್ಭಿಣಿಯೊಬ್ಬಳು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಗರ್ಭದಲ್ಲೇ ಶಿಶು ಮೃತಪಟ್ಟಿರುವ ವಿಷಯ ತಿಳಿದಿದೆ.
ತಾಯಿ ಜೀವಕ್ಕೆ ಅಪಾಯ ಆಗದಂತೆ ಶಿಶುವನ್ನು ವೈದ್ಯರು ಹೊರ ತೆಗೆದಿದ್ದರು. ಅಂತ್ಯಕ್ರಿಯೆ ಮಾಡುವುದಾಗಿ ಸಿಬ್ಬಂದಿಯಿಂದ ಶಿಶುವನ್ನು ಪಡೆದ ಪಾಲಕರು, ಅದನ್ನು ಕಸದರಾಶಿಯಲ್ಲಿ ಎಸೆದು ತೆರಳಿದ್ದಾರೆ. ನಾಯಿ, ಹಂದಿಗಳು ಶಿಶುವಿನ ತಲೆಭಾಗ ತಿನ್ನುತ್ತಿರುವ ದೃಶ್ಯ ಕಂಡ ಜನರು ವೈದ್ಯರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಧಾವಿಸಿದ ಪಿಎಸ್ಐ ಪ್ರಕಾಶರಡ್ಡಿ ಡಂಬಳ ಮತ್ತು ಸಿಡಿಪಿಒ ಶರಣಮ್ಮ ಕಾನಕೂರ, ಪಾಲಕರನ್ನು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ತಿಳಿಸಿದ್ದಾರೆ.