ಲಿಂಗಸುಗೂರು: ತಾಲೂಕಿನ ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರು ಲಿಂ.ಗಜದಂಡ ಶಿವಾಚಾರ್ಯರ 17ನೇ ಪುಣ್ಯಾರಾಧನೆ ಮತ್ತು ಅಭಿನವ ಗಜದಂಡ ಶಿವಾಚಾರ್ಯರ 17ನೇ ಪಟ್ಟಾಧಿಕಾರ ಮಹೋತ್ಸವ ಶನಿವಾರ ನಡೆಯಿತು.
ಶ್ರೀ ಮಠದಲ್ಲಿ ಶುಕ್ರವಾರ ರಾತ್ರಿಯಿಡೀ ಅಖಂಡ ಶಿವಭಜನೆ ಜರುಗಿತು. ಶನಿವಾರ ಬೆಳಗ್ಗೆ ಲಿಂ.ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ನಾಮಾವಳಿ, ಮಹಾಮಂಗಳಾರತಿ ಕಾರ್ಯಕ್ರಮ ನಡೆದವು. ಬಳಿಕ ಲೋಕ ಕಲ್ಯಾಣಾರ್ಥವಾಗಿ ಅಮರೇಶ್ವರ ಅಭಿನವ ಗುರು ಗಜದಂಡ ಶ್ರೀಗಳಿಂದ ನವದುರ್ಗಾ, ಚಂಡಿಕಾ, ಶಿವರುದ್ರ ಹೋಮ ಹವನಗಳು ನೆರವೇರಿದವು. ನಂತರ ಜಂಗಮ ವಟುಗಳಿಂದ ಅಯ್ಯಚಾರ ದೀಕ್ಷಾ ಸಂಸ್ಕಾರ, ಮಹಾಪ್ರಸಾದ ಕಾರ್ಯಕ್ರಮಗಳು ಜರುಗಿದವು.
ಯರಡೋಣಿ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳು, ಅರ್ಚಕರಾದ ಅಮರೇಶ ತಿಳಿ, ಗಂಗಾಧರಯ್ಯಶಾಸ್ತ್ರಿ, ಶಂಭುಲಿಂಗಯ್ಯ ಕಳಸದಗುಡಿ, ಶಿವಕುಮಾರ, ಗಂಗಾಧರ ಹೊನ್ನಳ್ಳಿ, ಮಹಾಂತೇಶ ಹಟ್ಟಿ ಇತರರಿದ್ದರು.