ಚಿಕ್ಕಮಗಳೂರು: ವಿದ್ಯಾರ್ಥಿ, ಯುವಜನರು ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಕಳಕಳಿ ಹೊಂದಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಿ.ಕೆ.ಸುಬ್ಬರಾಯ ಹೇಳಿದರು.
ಅದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ನಿಂದ ಅರಿಸಿನಗುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರೀಯತೆ ವಿಚಾರದಲ್ಲಿ ಯುವಕರು ಚಿಂತನೆ ನಡೆಸಬೇಕು. ನಮ್ಮ ದೇಶಕ್ಕಾಗಿ ನಾವುಎಂಬ ಹೆಮ್ಮೆ ನಮ್ಮಲ್ಲಿರಬೇಕು ಎಂದರು.
ಯುವಕರು ಉತ್ತಮ ರೀತಿಯಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಕಡೆಗೂ ಒತ್ತು ನೀಡಬೇಕು. ಅದಕ್ಕಾಗಿ ಇಂತಹ ಪರಿಸರದಲ್ಲಿ ಬೆರೆಯಬೇಕು. ಸಂಘಟಿತರಾಗಿ, ಸಾಮೂಹಿಕವಾಗಿ ಒಂದೆಡೆ ಕಲೆತು ಹಳ್ಳಿಗಳಲ್ಲಿರುವ ಕಷ್ಟ ಸುಖಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ ಮಾತನಾಡಿ, ಎಐಬಿಎಂ ಹಲವು ವರ್ಷಗಳಿಂದ ಎನ್ಎಸ್ಎಸ್ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಸಮುದಾಯಕ್ಕಾಗಿ ಸೇವೆ ಎನ್ನುವುದು ಶಿಬಿರದ ಮೂಲ ಉದ್ದೇಶ. ಯಾವುದೇ ಕ್ಷಣದಲ್ಲಿ ಕರೆದರೂ ನಾವು ಸೇವೆಗೆ ಸದಾ ಸಿದ್ಧ ಎನ್ನುವುದನ್ನು ಶಿಬಿರದಲ್ಲಿ ಕಲಿಸಲಾಗುತ್ತದೆ ಎಂದು ಹೇಳಿದರು.
ಕಾಲೇಜಿನಲ್ಲಿ ಕಲಿಯುವುದನ್ನು ಹೊರತುಪಡಿಸಿ ಪರಿಸರ ಸಂರಕ್ಷಣೆ, ಸ್ವಚ್ಛತೆ ಸೇರಿದಂತೆ ವಿವಿಧ ಸಾಮಾಜಮುಖಿ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಬಹುದು. ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಯಾವುದೇ ಜಾತಿ, ಮತ, ಪಂಥಗಳಿರುವುದಿಲ್ಲ. ಇಲ್ಲಿ ಎಲ್ಲರೂ ಒಂದೇ. ಸಮುದಾಯವನ್ನು ಹೇಗೆ ಬೆಳೆಸಬೇಕು. ಗ್ರಾಮದ ಪರಿಸ್ಥಿತಿ ಹೇಗಿದೆ. ಇನ್ನಷ್ಟು ಅಭಿವೃದ್ಧಿಗೆ ಏನು ಮಾಡಬಹುದು. ಜತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳು ಏನು ಮಾಡಬಹುದು ಎನ್ನುವುದನ್ನು ಸಮಾಲೋಚಿಸಲು ಶಿಬಿರವು ಉತ್ತಮ ವೇದಿಕೆ ಎಂದರು.
ಎಐಬಿಎಂನ ಪ್ರಾಚಾರ್ಯ ಡಾ. ಕೆ.ಎಸ್.ಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಕಾರ್ಯಕ್ರಮಾಧಿಕಾರಿ ರಾಕೇಶ್ ಹೊಸಮನಿ, ಸಹ ಶಿಬಿರಾಧಿಕಾರಿ ತನುಜಾ, ಅರಿಸಿನಗುಪ್ಪೆ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ್, ಕಾಫಿಬೆಳೆಗಾರ ಜಯಕೀರ್ತಿ, ಗ್ರಾಪಂ ಅಧ್ಯಕ್ಷ ದೀಪಕ್, ಸದಸ್ಯರಾದ ಶಿವಣ್ಣ, ಎಸ್ಡಿಎಂಸಿ ಸದಸ್ಯ ಚಂದ್ರಶೇಖರ್ ಉಪಸ್ಥಿತರಿದ್ದರು.
ನಮ್ಮ ದೇಶಕ್ಕಾಗಿ ನಾವುಎಂಬ ಹೆಮ್ಮೆ ನಮ್ಮಲ್ಲಿರಲಿ
ಅರಿಸಿನಗುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ. ಸಿ.ಕೆ.ಸುಬ್ಬರಾಯ, ಡಾ. ಸಿ.ಟಿ.ಜಯದೇವ, ಡಾ. ಕೆ.ಎಸ್.ಪ್ರಕಾಶ್ ರಾವ್, ರಾಕೇಶ್ ಹೊಸಮನಿ, ತನುಜಾ, ಚಂದ್ರಶೇಖರ್ ಮತ್ತಿತರರಿದ್ದರು.