ಬೇಲೂರು: ಪ್ರವಾಸಿ ತಾಣ ಬೇಲೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳು ಸೇರಿದಂತೆ ಎಲ್ಲ ವಾರ್ಡ್ಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡುತಿದ್ದು, ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮನವಿ ಮಾಡಿದರು.
ಪಟ್ಟಣದ 7 ನೇ ವಾರ್ಡ್ನಲ್ಲಿ ಶನಿವಾರ ಪುರಸಭೆ ಸಿಬ್ಬಂದಿಯ ಸ್ವಚ್ಛತಾ ಕಾರ್ಯ ವೀಕ್ಷಿಸಿ ಮಾತನಾಡಿದ ಅವರು, ವಾರಕ್ಕೊಮ್ಮೆ ಒಂದು ವಾರ್ಡ್ಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಜತೆಗೆ ಮುಚ್ಚಿರುವ ಚರಂಡಿ ಮತ್ತು ಚರಂಡಿ ಪಕ್ಕದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನಚ್ಚರಿಕೆ ಕ್ರಮ ವಹಿಸಲಾಗುತ್ತಿದೆ ಎಂದರು.
ವಾರ್ಡ್ನಲ್ಲಿ ಹಾಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಸ್ಥಳೀಯ ಸದಸ್ಯರು, ನಾಗರಿಕರೊಂದಿಗೆ ಚರ್ಚಿಸಿ ಯಾವ ಕಾಮಗಾರಿಯಿಂದ ಅನುಕೂಲವಾಗುತ್ತದೆ ಎಂಬುದನ್ನು ಅರಿತು ತ್ವರಿತವಾಗಿ ಕೆಲಸ ಮಾಡಿಸಬೇಕು. ಅಲ್ಲದೇ, ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಬಹುತೇಕ ಅಂಗಡಿ-ಮುಂಗಟ್ಟುಗಳಲ್ಲಿ ಕದ್ದುಮುಚ್ಚಿ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದರು.
ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಕಂದಾಯಾಧಿಕಾರಿ ಪ್ರಸನ್ನ, ಮೇಸ್ತ್ರಿ ಹರೀಶ್ಇದ್ದರು.