ಬೆಂಗಳೂರು: ಬಡವರು ನಿವೇಶನ ಕೊಳ್ಳಲು ಹಾಗೂ ಮನೆ ಕಟ್ಟುವುದಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾನೂನು ಸರಳೀಕರಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಯಲಹಂಕ ತಾಲೂಕಿನ ಅಗ್ರಹಾರಪಾಳ್ಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಲೋಕಾರ್ಪಣೆ’ ಮಾಡಿ ವಸತಿ ಹಸ್ತಾಂತರಿಸಿ ಮಾತನಾಡಿದರು.
ಭವಿಷ್ಯದಲ್ಲಿ ಮನೆ ಕಟ್ಟುವುದು ಕಷ್ಟವಾಗಲಿದೆ. ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ನಿರ್ದಿಷ್ಟ ರಿಯಾಯಿತಿಗಳಿಲ್ಲ. ಭೂಮಿ ಬೆಲೆ ಹೆಚ್ಚಾಗುತ್ತಿದೆ. ಹಿಂದೆ ಮಾಡಿರುವ ಕಾನೂನುಗಳಿಂದ ಸಾಮಾನ್ಯ ಜನರು ನಿವೇಶನ ಖರೀದಿ ಮಾಡುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ, ಮನೆ ಕಟ್ಟಲು ಅವಕಾಶ ಸಿಗುವಂತೆ ಕಾನೂನಿಗೆ ತಿದ್ದುಪಡಿ ತಂದು, ನಿರ್ಬಂಧ ತೆಗೆದುಹಾಕಿ ನೇರವಾಗಿ ಕೈಗೆಟುಕುವ ಬೆಲೆಯಲ್ಲಿ ಜಮೀನು ದೊರೆಯುವ ವ್ಯವಸ್ಥೆ ಕಲ್ಪಿಸಲಾಗುವುದು. ವಸತಿಗಾಗಿ ಜಮೀನು ಪಡೆಯಲು, ಮನೆ ಕಟ್ಟಲು ಎಲ್ಲ ಕಾನೂನನ್ನು ಸರಳ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಐದು ಲಕ್ಷ ಮನೆಗಳು ಅಂತಿಮ ಹಂತದಲ್ಲಿವೆ. ಬರೀ ಘೋಷಣೆ ಮಾಡಿದರೆ ಸಾಲದು ಅನುದಾನ ಇಡಬೇಕು. ಹಿಂದಿನ ಕಾಂಗ್ರೆಸ್ ಸರ್ಕಾರ, ಚುನಾವಣೆ ಸಂದರ್ಭದಲ್ಲಿ ಅನುದಾನ ನೀಡದೆ 15 ಲಕ್ಷ ಮನೆ ಕಟ್ಟುವುದಾಗಿ ಘೋಷಿಸಿತ್ತು. ಆದರೆ, ಸಂಪೂರ್ಣ ಹಣವನ್ನು ಮೀಸಲಿಡದೆ ಹೋದರು. 15 ಸಾವಿರ ಕೋಟಿ ರೂ. ಪೈಕಿ ಕೇವಲ 3 ಸಾವಿರ ಕೋಟಿ ರೂ. ಮೀಸಲಿಟ್ಟರು. ಹಾಗಾಗಿ, ಅಗತ್ಯ ಇರುವಷ್ಟು ಮನೆಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೂಕ್ತ ಅನುದಾನ ಒದಗಿಸಿ ಅಂದಾಜು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿದ್ದು. ಇಂದು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ನಾವಿದ್ದೇವೆ ಎಂದು ಸಿಎಂ ವಿವರಿಸಿದರು. ಸೋಮಣ್ಣ ವಸತಿ ಸಚಿವರಾದ ಬಳಿಕ 5 ಲಕ್ಷ ಮನೆಗಳ ನಿರ್ಮಾಣಕ್ಕೆ ರೂಪುರೇಷ ನೀಡಿದ್ದಾರೆ. ಆಯ್ಕೆಯಾಗಿದ್ದ ಅನರ್ಹ ಫಲಾನುಭವಿಗಳ ತೆಗೆಯಲು ವಿಶೇಷ ಸಾಫ್ಟ್ವೇರ್ ಅಳವಡಿಸಿದ್ದಾರೆ ಎಂದು ಸೋಮಣ್ಣ ಕಾರ್ಯದ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಯಲಹಂಕ ಕ್ಷೇತ್ರದಲ್ಲಿ 900 ಮನೆ ನೀಡಿಕೆ: ನಾನು ಸಿಎಂ ಆದ ಬಳಿಕ ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ, ನಗರ ಪ್ರದೇಶಗಳಲ್ಲಿ 1 ಲಕ್ಷ ಸೇರಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ಫಲಾನುಭವಿಗಳ ಆಯ್ಕೆ ಪ್ರಗತಿಯಲ್ಲಿದೆ. ನಾವು ನುಡಿದಂತೆ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣ ಮಾಡುವುದಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ, ಚುನಾವಣಾ ವೇಳೆ ತರಾತುರಿಯಲ್ಲಿ ಘೋಷಿಸಿತ್ತು. ನಮ್ಮ ಸರ್ಕಾರವೂ ಬೇರೆ ಬೇರೆ ಪ್ರದೇಶಗಳಲ್ಲಿ 492 ಎಕರೆ ಪಡೆದು 50 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 20 ಸಾವಿರ ಮನೆಗಳ ಪೈಕಿ ಈಗ 5 ಸಾವಿರ ಮನೆಗಳ ಹಂಚಿಕೆ ಮಾಡಲಾಗಿದ್ದು, ಯಲಹಂಕ ಕ್ಷೇತ್ರದಲ್ಲಿ ಒಟ್ಟು 900 ಮನೆಗಳನ್ನು ನೀಡಲಾಗಿದೆ. ಐದಾರು ಕ್ಷೇತ್ರಗಳಿಗೂ ಮನೆಗಳ ಹಂಚಿಕೆ ಕಾರ್ಯವೂ ನಡೆಯಲಿದೆ. ಹಾಗಾಗಿ, ಹಂತ ಹಂತವಾಗಿ 50 ಸಾವಿರ ಮನೆಗಳನ್ನು ಹಸ್ತಾಂತರ ಮಾಡುವ ಗುರಿ ಹೊಂದಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.