ನವದೆಹಲಿ: ಮ್ಯಾನ್ಮಾರ್ನ ಉತ್ತರ ಭಾಗದ ಕಚಿನ್ ರಾಜ್ಯದ ಪಕಾಂತ್ ಪ್ರದೇಶದಲ್ಲಿ ಜೇಡ್ ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಭೂಕುಸಿತ ಉಂಟಾಗಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಭಾರಿ ಮಳೆ ಸುರಿಯುತ್ತಿತ್ತು. ಇದರಿಂದಾಗಿ ಒದ್ದೆಯಾದ ಮಣ್ಣು ಜಾರಿ ಅದರಡಿಯಲ್ಲಿ ಕಾರ್ಮಿಕರು ಸಿಲುಕಿಕೊಂಡರು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದ್ದಾರೆ.
ಪಕಾಂತ್ ಪ್ರದೇಶದಲ್ಲಿ ಗಣಿಗಳ ನಿಯಂತ್ರಣ ಸಮರ್ಪಕವಾಗಿಲ್ಲ. ಹಾಗಾಗಿ ಈ ಪ್ರದೇಶದಲ್ಲಿ ಇಂಥ ದುರಂತಗಳು ಸಾಮಾನ್ಯ. ಸದ್ಯ ಈ ಪ್ರಕರಣದಲ್ಲಿ ನೂರಾರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿರುವ ಶಂಕೆ ಇದೆ. ಆದ್ದರಿಂದ, ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕದಳ ಸಿಬ್ಬಂದಿ ಹೇಳಿದ್ದಾರೆ.