ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ್ದ ನೂರಾರು ಕೋಟಿ ರೂ.ಬೆಳೆ ಬಾಳುವ ಅಂದಾಜು 25 ಎಕರೆ ಜಾಗವನ್ನು ಶಾಸಕ ಎಂ.ಸತೀಶ್ರೆಡ್ಡಿ, ಇವರ ತಂದೆ ಸಿ.ಮುನಿರೆಡ್ಡಿ ಮತ್ತು ಮಾಜಿ ಉಪ ಮೇಯರ್ ಮೋಹನ್ ರಾಜ್ ಸೇರಿ ಇತರರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 27/1, 27/3, 29/1, 29/1, 29/2, 29/3, 30,33 ಮತ್ತು 35ರಲ್ಲಿ ಬಿಡಿಎಯಿಂದ 1994ರಿಂದ 1999ರ ಅವಧಿಯಲ್ಲಿ ಬಡಾವಣೆ ರಚಿಸಿತ್ತು. ಇದಕ್ಕಾಗಿ ರಸ್ತೆ, ಯುಜಿಡಿ, ವಿದ್ಯುತ್ ಸಂಪರ್ಕ ಸೇರಿ 16 ಕೋಟಿ ರೂ.ವ್ಯಯಿಸಿತ್ತು. ಅಂದಿನ ದಿನದಲ್ಲಿ ಕೆಲವರು ಬಿಡಿಎ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಬಿಡಿಎ ಪರವಾಗಿ ಹೈಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ಸಹ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಹೀಗಿದ್ದರೂ, ಭೂ ಕಳ್ಳರು ಕಾನೂನುಬಾಹಿರವಾಗಿ ನಕಲಿ ದಾಖಲೆ ಸೃಷ್ಟಿಸಿ ಈ ಜಾಗದಲ್ಲಿ ಕಂದಾಯ ಬಡಾವಣೆ ನಿರ್ಮಿಸಿ ಕೋಟ್ಯಂತರ ರೂ.ಗೆ ಮಾರಾಟ ಮಾಡಿದ್ದಾರೆ. ಅಕ್ರಮದಲ್ಲಿ ಸತೀಶ್ರೆಡ್ಡಿ, ಮುನಿರೆಡ್ಡಿ, ಮೋಹನ್ ರಾಜ್ ಸೇರಿ ಇತರರು ಮತ್ತು ಬಿಡಿಎ ಭ್ರಷ್ಟ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ದಾಖಲೆ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಇದನ್ನೂ ಓದಿ: ಬ್ರಾಹ್ಮಣ ಸಮಾಜಕ್ಕೆ ಮೀಸಲಾತಿ ಕೊಡಿ ಎಂದು ಕೇಳಲ್ಲ; ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು
ಬಿಡಿಎಯಿಂದ ಹಂಚಿಕೆಯಾದ ನಿವೇಶನದಾರರಿಗೆ ಜೀವ ಬೆದರಿಕೆ ಹಾಕಿ ತೆರವುಗೊಳಿಸಿರುವ ಭೂ ಕಬಳಿಕೆದಾರರು, ತಾವೇ ಮಾಲೀಕರಂದು ನಂಬಿಸಿ ನಕಲಿ ದಾಖಲೆ ಸೃಷ್ಟಿಸಿ ಅನೇಕರಿಗೆ ಮಾರಾಟ ಮಾಡಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳಿಗೆ ಕೋಟ್ಯಂತರ ರೂ.ಲಂಚ ಕೊಟ್ಟು ಈ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತೆ ನೋಡಿಕೊಂಡಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳು, ಬಿಡಿಎ ಅಧ್ಯಕ್ಷರು, ಆಯುಕ್ತರು ಹಾಗೂ ವಿಶೇಷ ಜಾಗೃತದಳ ಸ್ಥಳ ಪರಿಶೀಲಿಸಿ ಖುದ್ದು ವರದಿ ನೀಡಿದ್ದರೂ ಅಕ್ರಮದಲ್ಲಿ ಭಾಗಿಯಾದ ಪ್ರಭಾವಿಗಳ ಹೆಡಮುರಿ ಕಟ್ಟಲು ಇದುವರೆಗೆ ಸಾಧ್ಯವಾಗಿಲ್ಲ. ವಿಧಾನಸಭಾ ಮತ್ತು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಉತ್ತರದಲ್ಲಿ ಈ ಜಾಗ ಬಿಡಿಎಗೆ ಸೇರುತ್ತದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಆದರೂ, ಈ ಜಾಗವನ್ನು ಭೂ ಕಳ್ಳರಿಂದ ಬಿಡಿಸಿಕೊಳ್ಳಲು ಇಂದಿಗೂ ಆಗಿಲ್ಲ ಎಂದು ವಿವರಿಸಿದರು.
ಬೊಮ್ಮಾನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಕ್ತಾರ ಅನಿಲ್ ರೆಡ್ಡಿ, ವಕೀಲ ವಿವೇಕ್ ಮತ್ತಿತರರಿದ್ದರು.
ಸರ್ಕಾರಯಿಂದ ತನಿಖೆಯಾಗಲಿ:
ಬೃಹತ್ ಭೂ ಹಗರಣದ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಸಮಗ್ರ ತನಿಖೆ ನಡೆಸಬೇಕು. ಅಕ್ರಮದಲ್ಲಿ ಭಾಗಿಯಾದ ಭೂಕಳ್ಳರ ಮತ್ತು ಪಟ್ಟಭದ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅಕ್ರಮ ನಡೆದಿರುವ ಬಗ್ಗೆ ಸೂಕ್ತ ದಾಖಲೆಗಳು ಇರುವುದರಿಂದ ನೂರಾರು ಕೋಟಿ ರೂ.ಮೌಲ್ಯದ ಸರ್ಕಾರಿ ಜಮೀನು ಅನ್ನು ರಕ್ಷಿಸಲು ಮುಂದಾಗಬೇಕು. ಹಗರಣ ಸಂಬಂಧ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗುವುದು. ಅನ್ಯಾಯಕ್ಕೆ ಒಳಗಾಗಿರುವ 1,210 ಮಂದಿಗೆ ನ್ಯಾಯ ಸಿಗುವಂತಾಗಬೇಕು. 8 ತಿಂಗಳಿಂದ ಅಕ್ರಮದ ದಾಖಲೆಗಳನ್ನು ಸಂಗ್ರಹಿಸಿ ಬಯಲಿಗೆಳೆದಿದ್ದೇನೆ ಎಂದು ಉಮಾಪತಿ ಶ್ರೀನಿವಾಸಗೌಡ ಮಾಹಿತಿ ನೀಡಿದರು.
ಇದನ್ನೂ ಓದಿ: ಭಿನ್ನಾಭಿಪ್ರಾಯ ಬದಿಗಿಟ್ಟು ಬಿಜೆಪಿ ಜತೆ ಮೈತ್ರಿ ಮುಂದುವರಿಸುವುದಾಗಿ ಎಐಎಡಿಎಂಕೆ ಘೋಷಣೆ!
ನಿರೀಕ್ಷಣಾ ಜಾಮೀನು ಆದೇಶ ಪ್ರತಿ ಕೈ ಸೇರುತ್ತಿದ್ದಂತೆ ಲೋಕಾಯುಕ್ತ ಕಚೇರಿಗೆ ಮಾಡಾಳ್ ವಿರೂಪಾಕ್ಷಪ್ಪ ಹಾಜರ್!