ಬೆಳ್ತಂಗಡಿ: ಇಲ್ಲಿನ ದೂರವಾಣಿ ವಿನಿಮಯ ಕೇಂದ್ರದ ಸಮೀಪ ಕುಶಾಲನಗರ ಮೂಲದ ತಮ್ಮಯ್ಯ(55) ಎಂಬುವರ ಮೃತದೇಹ ಶುಕ್ರವಾರ ಕಂಡು ಬಂದಿದ್ದು, ಪೊಲೀಸ್ ಸಮ್ಮುಖದಲ್ಲಿ ಕುಟುಂಬಸ್ಥರ ಪತ್ತೆಗಾಗಿ ಮೃತದೇಹದ ಬಳಿ ಇದ್ದ ಬ್ಯಾಗ್ ಹುಡುಕಿದಾಗ ಅದರಲ್ಲಿ ಸುಮಾರು 6.65 ಲಕ್ಷ ರೂ. ಪತ್ತೆಯಾಗಿದೆ.
ಉಜಿರೆಯಲ್ಲಿ ಬಹಳ ಕಾಲದಿಂದ ವಾಸವಿದ್ದು, ರಾತ್ರಿ ಬಸ್ ತಂಗುದಾಣ, ಅಂಗಡಿ ಮುಂಭಾಗ, ಬಿಎಸ್ಸೆನ್ನೆಲ್ ಕಚೇರಿ ಪಕ್ಕ ಮಲಗುತ್ತಿದ್ದರು. ಕೂಲಿ ಕೆಲಸ ಮಾಡುತ್ತಿದ್ದು, ಅದರಿಂದ ಸಂಗ್ರಹಿಸಿದ ಹಣವಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತರ ವಾರಸುದಾರರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಮೃತದೇಹವನ್ನು ಉಜಿರೆ ಬೆಳಾಲು ಘಟಕದ ಸ್ವಯಂಸೇವಕರಾದ ರವೀಂದ್ರ, ಸುಧೀರ್ ಹಾಗೂ ರಾಘವೇಂದ್ರ ಅವರು ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಿದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್ ಉಪಸ್ಥಿತರಿದ್ದು ತಂಡದ ಸದಸ್ಯರಿಗೆ ನಿರ್ದೇಶನ ನೀಡಿದ್ದರು. ಮೃತರ ವಾರಸುದಾರರಿದ್ದಲ್ಲಿ ಬೆಳ್ತಂಗಡಿ ಆರಕ್ಷಕ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.