More

    ನಿಮ್ಮನೆಗೂ ಅದೇ ರಸ್ತೆಯಲ್ಲಿ ಹೋಗ್ತೀರಲ್ವ, ಸ್ವಲ್ಪವೂ ಬೇಜಾರಾಗಲ್ವಾ?: ಶಾಸಕರಿಗೆ ಯುವತಿಯ ಪ್ರಶ್ನೆ

    ಉಡುಪಿ: ದಕ್ಷಿಣಕನ್ನಡ-ಉಡುಪಿ ಜಿಲ್ಲೆಯಲ್ಲಿನ ರಸ್ತೆಯ ದುರವಸ್ಥೆಯ ಕುರಿತು ಇದೀಗ ಅಲ್ಲಿನ ಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಲಾರಂಭಿಸಿದ್ದು, ಅದು ಬಹಿರಂಗವಾಗಿಯೇ ಸ್ಫೋಟಗೊಳ್ಳಲಾರಂಭಿಸಿದೆ. ಯುವತಿಯೊಬ್ಬರು ಶಾಸಕರ ವಿರುದ್ಧ ವ್ಯಕ್ತಪಡಿಸಿದ ಅಂಥ ಬೇಸರವೊಂದರ ವಿಡಿಯೋ ಇದೀಗ ವೈರಲ್​ ಆಗಿದೆ.

    ಕೋಮಲ್ ಜೆನಿಫರ್ ಎಂಬ ಯುವತಿ ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ಉದ್ದೇಶಿಸಿ ತೀವ್ರ ಅಸಮಾಧಾನ ತೋಡಿಕೊಂಡಿದ್ದಲ್ಲದೆ, ತಮ್ಮ ಬೇಸರಕ್ಕೆ ರಸ್ತೆ ಗುಂಡಿಗಳೇ ಕಾರಣ ಎಂಬುದನ್ನು ಹೇಳಿಕೊಂಡಿದ್ದಾರೆ. ಆ. 26ರಂದು ಅವರು ವಿಡಿಯೋ ಮಾಡಿದ್ದು ತಮ್ಮೂರಿನ ರಸ್ತೆಯ ದುರವಸ್ಥೆಯ ಕುರಿತು ಮಾತನಾಡಿ, ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ.

    ಊರಿನಲ್ಲಿ ಗುಂಡಿಗಳ ನಡುವೆ ರಸ್ತೆಯನ್ನು ಹುಡುಕುವಂತಾಗಿದೆ. ನಾವು ಎಲ್ಲ ತೆರಿಗೆ, ಟೋಲ್ ಶುಲ್ಕ ಎಲ್ಲವನ್ನೂ ಕಟ್ಟಿದ್ದೇವೆ. ಆದರೆ ಅದೆಲ್ಲ ಯಾರ ಹೊಟ್ಟೆಗೆ ಮಣ್ಣು ಹಾಕಲಿಕ್ಕೆ? ಕೇಳಿದರೆ ಸೇತುವೆ ಕಟ್ಟಿದ್ದೇವೆ, ಅದು ಕಟ್ಟಿದ್ದೇವೆ ಇದು ಕಟ್ಟಿದ್ದೇವೆ ಎನ್ನುತ್ತೀರಿ. ನೀವು ಒಂದು ಕೆಲಸವಾದರೂ ಸರಿಯಾಗಿ ಮಾಡಿದ್ದೀರಾ ಎಂದು ಕೋಮಲ್ ಪ್ರಶ್ನೆ ಮಾಡಿದ್ದಾರೆ.

    ಮಣಿಪಾಲ ಅಂಬಾಗಿಲು ಗುಂಡಿಬೈಲು ಕಲ್ಸಂಕ ರಸ್ತೆಯಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಈಕೆ, ನೀವು ನಿಮ್ಮ ಮನೆಗೂ ಅದೇ ರಸ್ತೆಯಲ್ಲಿ ಹೋಗುತ್ತೀರಿ ಅಲ್ವಾ? ಅದನ್ನೆಲ್ಲ ನೋಡಿ ನಿಮಗೆ ಸ್ವಲ್ಪವೂ ಬೇಜಾರಾಗಲ್ವಾ? ನಿಮಗೆ ಸ್ವಲ್ಪವಾದರೂ ಕಾಮನ್​ ಸೆನ್ಸ್, ಮನುಷ್ಯತ್ವ ಏನಾದ್ರೂ ಉಂಟಾ? ಎಂದು ತುಳುವಿನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಪ್ರಧಾನಿ ಮೋದಿ ಬರುತ್ತಿರುವುದಕ್ಕಾದರೂ ಅಲ್ಲಿ ಸ್ವಲ್ಪ ರಸ್ತೆ ಸರಿಯಾಗುತ್ತಿದೆ. ಇಲ್ಲಿ ರಸ್ತೆ ಸರಿಯಾಗಲು ಯಾರು ಬರಬೇಕು? ಎಂದು ಕಿಡಿಕಾರಿದ್ದಾರೆ.

    ಯುವತಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್, ನಾನು ಮನೆಗೆ ಹೋಗುವುದು ಇದೇ ರಸ್ತೆಯಲ್ಲಿ, ಈ ರಸ್ತೆ ಸಮಸ್ಯೆಯ ಬಗ್ಗೆ ನನಗೆ ಗಂಭೀರತೆ ಇದೆ, ಈಗಾಗಲೇ ಒಂದು ಬಾರಿ ಪ್ಯಾಚ್ ವರ್ಕ್ ಮಾಡಿದ್ದೆವು. ಕಳೆದ ಬಾರಿ ಮತ್ತೊಮ್ಮೆ ಜೋರು ಮಳೆಯಾಗಿದ್ದರಿಂದ ರಸ್ತೆ ಹಾಳಾಗಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ ಕೇವಲ ಜಲ್ಲಿ ಹಾಕಲಾಗಿದೆ. ವಾಹನ ಸಂಚಾರಕ್ಕೆ ಅಡ್ಡಿ ಆಗಬಾರದೆಂದು ಎಂದು ಸಣ್ಣ ಲೇಯರ್ ಡಾಂಬರ್ ಹಾಕಿದ್ದೇವೆ ಅಷ್ಟೇ. ಇನ್ನು ಎರಡು ಲೇಯರ್ ಡಾಂಬರ್​ ಹಾಕುವುದು ಬಾಕಿ ಇದೆ. ಜಲ್ಲಿ ಹಾಕಿ ಹಾಗೆ ಬಿಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಆದರೆ ಜನರ ಅನುಕೂಲಕ್ಕೆ ಒಂದು ಸಣ್ಣ ಲೇಯರ್ ಡಾಂಬರ್ ಹಾಕಲು ಹೇಳಿದ್ದೆ. ಹೊಸ ರಸ್ತೆಯಾದ ಕಾರಣ ಮಳೆಗೆ ಸಿಂಕ್ ಆಗುತ್ತಿದೆ. ಮೊದಲ ಮಳೆಗೆ ರಸ್ತೆ ಸಿಂಕ್ ಆಗುವುದು ಸಾಮಾನ್ಯ ಎಂದು ಹೇಳಿದ್ದಾರೆ.

    ಅಲ್ಲದೆ ಇದು ಕಳಪೆ ಕಾಮಗಾರಿಯಲ್ಲ. ಏಕೆಂದರೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ನಿಂತ ತಕ್ಷಣ ಪ್ಯಾಚ್ ವರ್ಕ್ ಮಾಡುತ್ತೇವೆ. ಕಳೆದ ಡಿಸೆಂಬರ್​​ನಲ್ಲಷ್ಟೇ ಈ ಕಾಮಗಾರಿ ಪ್ರಾರಂಭವಾಗಿದೆ. ಇದೊಂದು ದೊಡ್ಡ ಕಾಮಗಾರಿಯಾಗಿದ್ದು ಸಾರ್ವಜನಿಕರು ಸಹಕರಿಸಬೇಕು. ಸಿಂಗಲ್ ರೋಡನ್ನು ಸದ್ಯ ಡಬಲ್ ರೋಡಾಗಿ ಮಾರ್ಪಡಿಸುತ್ತಿದ್ದೇವೆ. ಈ ರಸ್ತೆ ಕಾಮಗಾರಿಗೆ 26 ಕೋಟಿ ರೂ. ಅನುದಾನ ತಂದಿದ್ದೇನೆ. ಈ ಬಗ್ಗೆ ನೂರಕ್ಕೂ ಅಧಿಕ ಸಭೆ ನಡೆಸಿದ್ದೇನೆ. ಕೆಲಸ ಆಗುವ ಸಮಯದಲ್ಲಿ ಇಂತಹ ಅವ್ಯವಸ್ಥೆಗಳಾಗುವುದು ಸಹಜ. ಒಮ್ಮೆ ಕಾಮಗಾರಿ ಮುಗಿದರೆ ಏಳೆಂಟು ವರ್ಷ ಯಾವುದೇ ತೊಂದರೆ ಆಗಲ್ಲ. ಅಭಿವೃದ್ಧಿ ಮಾಡಲು ಹೊರಟರೆ ಟೀಕೆ ಬರುತ್ತೆ, ಅಭಿವೃದ್ಧಿ ಮಾಡದಿದ್ದರೆ ಯಾರೂ ಟೀಕಿಸುವುದಿಲ್ಲ. ನಾಗರಿಕರಾಗಿ ಅವರಿಗೆ ಪ್ರಶ್ನಿಸುವ ಹಕ್ಕಿದೆ, ಆದರೆ ಗೊಂದಲಕ್ಕೀಡಾಗಬೇಡಿ ಎಂದು ಶಾಸಕರು ಸಮಜಾಯಿಷಿ ನೀಡಿದ್ದಾರೆ.

    ಕೊಡಗಲ್ಲಿದು ಒಂದು ಮೊಟ್ಟೆಯ ವ್ಯಥೆ: ಸಿದ್ದರಾಮಯ್ಯ ಪ್ರಕರಣದ ಸೈಡ್ ಇಫೆಕ್ಟ್; ರಾಜಾ ಸೀಟೇ ಖಾಲಿ…

    ‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts