More

    ಮಹಿಳೆಯರೇ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ

    ಚಿಕ್ಕಮಗಳೂರು: ಮಹಿಳೆಯರು ಸೇವಾಕಾರ್ಯಗಳಲ್ಲಿ ಆಸಕ್ತಿವಹಿಸಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಸುಲೋಚನಾ ಶೇಖರ್ ತಿಳಿಸಿದರು.

    ಮಹಿಳಾ ಜಾಗೃತಿ ಸಂಘ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ 37ನೇ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಮನೆಗೆ ಸೀಮಿತರಾಗಿದ್ದ ಅನೇಕ ಮಹಿಳೆಯರನ್ನು ಸಮಾಜಮುಖಿಯಾಗಿಸುವಲ್ಲಿ ಮಹಿಳಾ ಜಾಗೃತಿ ಸಂಘ ಶ್ರಮಿಸಿದೆ. ಜತೆಗೆ ಸಣ್ಣಪುಟ್ಟ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಸೇವೆ ಮಾಡುವುದರಲ್ಲಿ ಇರುವ ಸಂತೋಷದ ಅರಿವು ಮೂಡಿಸಿದೆ ಎಂದು ಹೇಳಿದರು.
    ಶಾಲೆಗಳು, ವೃದ್ಧಾಶ್ರಮ, ಅಂಧಮಕ್ಕಳ ಶಾಲೆ, ಅಂಗವಿಕಲರ ತಾಣಗಳಿಗೆ ಭೇಟಿನೀಡಿ ಒಂದಷ್ಟು ಸಮಯ ಅವರ ಜತೆಗೆ ಕಳೆದು ಅವರ ಸಣ್ಣಪುಟ್ಟ ಅವಶ್ಯಕತೆಗಳನ್ನು ಪೂರೈಸುವುದರಲ್ಲಿ ನಿಜವಾದ ಸಂತೋಷ ಕಾಣಬಹುದು. ಸಂಘದಲ್ಲಿ 500ಕ್ಕೂ ಹೆಚ್ಚು ಸದಸ್ಯರಿದ್ದು ಎಲ್ಲರೂ ಒಂದಿಲ್ಲೊಂದು ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಸಂಘದ ಹಿರಿಮೆಯೂ ಹೆಚ್ಚುತ್ತದೆ ಎಂದರು.
    ಪ್ಯಾರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಮೂಡಿಗೆರೆ ರಕ್ಷಿತಾ ರಾಜು ಮತ್ತು ಆಕೆಯ ತರಬೇತುದಾರ ರಾಹುಲ್ ಅವರನ್ನು ಸನ್ಮಾನಿಸಲಾಯಿತು.
    ಸನ್ಮಾನ ಸ್ವೀಕರಿಸಿ ರಕ್ಷಿತಾ ರಾಜು ಮಾತನಾಡಿ, ತಂದೆ, ತಾಯಿಯನ್ನು ಕಳೆದುಕೊಂಡು ಅಜ್ಜಿಯ ಪಾಲನೆಯಲ್ಲಿ ಬೆಳೆದ ನನಗೆ ಡಾ. ಕೃಷ್ಣೇಗೌಡ ಅವರ ಆಶಾಕಿರಣ ಶಾಲೆ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ದಶಕಗಳಿಗೂ ಹೆಚ್ಚುಕಾಲ ಸಹಾಯ ಮಾಡಿದೆ. ಕ್ರೀಡಾ ಸಾಧನೆಗೆ ಪ್ರೋತ್ಸಾಹ ಸಿಕ್ಕಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸುವಂತಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಆಹ್ವಾನಿಸಿ ಅಭಿನಂದಿಸಿದ್ದು ಜೀವನದ ಅವಿಸ್ಮರಣೀಯ ಸಂದರ್ಭ. ನನ್ನ ಜಿಲ್ಲೆಯಲ್ಲೂ ಪ್ರೀತಿ, ವಿಶ್ವಾಸ ತೋರುತ್ತಿರುವುದು ಹೆಚ್ಚಿನ ಗುರಿ ಸಾಧನೆಗೆ ಪ್ರೋತ್ಸಾಹ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
    ಆಟೋಟ ಸ್ಪರ್ಧಾ ವಿಜೇತರಿಗೆ ಕಾರ್ಯದರ್ಶಿ ಕಾತ್ಯಾಯಿನಿ ಶೇಖರ್, ಖಜಾಂಚಿ ಸುಲೋಚನಮ್ಮ ಶ್ರೀನಿವಾಸ ಶೆಟ್ಟಿ ಮತ್ತು ಉಪಾಧ್ಯಕ್ಷೆ ಕೃಷ್ಣೇವೇಣಿ ಗೋಪಾಲ ಬಹುಮಾನ ವಿತರಿಸಿದರು. ನಿರ್ದೇಶಕರಾದ ಗುಣವತಿ, ರೇಣುಕಾ ಪ್ರಸನ್ನ, ಡಿ.ಎಸ್.ಮಮತಾ, ಸಿ.ಎಂ.ಹೇಮಾ, ಕವಿತಾ ಗೋಪಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts