ಕುಷ್ಟಗಿ: ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಕುಡಿವ ನೀರು ಪೂರೈಸುವ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಹುನಗುಂದ ತಾಲೂಕಿನ ನಿಡಸನೂರಿನಲ್ಲಿರುವ ಮಧ್ಯಂತರ ಕಚ್ಚಾ ನೀರು ಎತ್ತುವಳಿ ಪ್ರವರ್ತಕ ಕೇಂದ್ರ ಹಾಗೂ ಕೌಜಗನೂರಿನಲ್ಲಿರುವ ಜಾಕ್ವೆಲ್ ಮತ್ತು ಪಂಪಿಂಗ್ ಕೇಂದ್ರಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಅಧಿಕಾರಿಗಳೊಂದಿಗೆ ಶುಕ್ರವಾರ ತೆರಳಿ ಪರಿಶೀಲಿಸಿದರು.
ಕೌಜಗನೂರಿನಲ್ಲಿರುವ ಜಾಕ್ವೆಲ್ನಲ್ಲಿ ನೀರೆತ್ತುವ ಎರಡು ಪಂಪ್ಗಳಿದ್ದು ಒಂದೇ ಪಂಪ್ನಿಂದ ನೀರು ಪೂರೈಸುತ್ತಿರುವುದರಿಂದ ಎರಡೂ ತಾಲೂಕಿನ ಜನವಸತಿಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಎರಡೂ ಪಂಪ್ನಿಂದ ನೀರು ಪೂರೈಸಲು ಶಾಸಕ ಬಯ್ಯಪುರ ಅಧಿಕಾರಿಗಳಿಗೆ ಸೂಚಿಸಿದರು. ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗದ ಎಇಇ ರಘುನಾಥ್, ಜೆಇ ರಾಜಶೇಖರ್ ಕಟ್ಟಿಮನಿ ಶಾಸಕರ ಜತೆಗಿದ್ದರು.