ಹುಣಸೂರು : ದಶಕಗಳಿಂದ ಅನಾಥ ಶವಗಳನ್ನು ಸಂಸ್ಕಾರ ಮಾಡುವ ಮೂಲಕ ಪವಿತ್ರ ಸೇವೆ ಮಾಡುತ್ತಿರುವ ಬಿಳಿಕೆರೆ ಆಟೋ ಮಂಜು ಅವರನ್ನು ಸನ್ಮಾನಿಸುವ ಮೂಲಕ ದಲಿತ ಸಂಘರ್ಷ ಸಮಿತಿ ಬುದ್ಧ ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಿತು.
ಗುರುವಾರ ತಾಲೂಕಿನ ಬಿಳಿಕೆರೆಯ ಆಟೋ ನಿಲ್ದಾಣದ ಬಳಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ರೈತಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ದಿಕ್ಕು ಇಲ್ಲದ ಅನಾಥ ಶವಗಳ ಶವಸಂಸ್ಕಾರ ಮಾಡುತ್ತಿರುವ ಈ ಸೇವಾಕಾರ್ಯ ಮಾನವೀಯತೆಗೆ ಮುಕುಟಪ್ರಾಯದಂತಿದೆ. ಸಮಾಜದಲ್ಲಿ ಇಂತಹವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಹೆತ್ತ ತಂದೆ-ತಾಯಿಯರನ್ನೇ ತಿರಸ್ಕಾರದಿಂದ ನೋಡುವ ಮಕ್ಕಳ ನಡುವೆ ಯಾರದ್ದೋ ಜೀವಕ್ಕೆ ಮುಕ್ತಿ ನೀಡುವ ಕಾರ್ಯ ನಡೆಸುವ ಇವರ ಕಾರ್ಯ ಶ್ಲಾಘನೀಯ ಎಂದರು.
ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಸುಮಾರು 250ಕ್ಕೂ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ, ನೀರಿನಲ್ಲಿ ಮುಳುಗಿದ, ರಸ್ತೆಯಲ್ಲಿ ಅಪಘಾತಕ್ಕೀಡಾದ ಶವಗಳನ್ನು ಸಂಸ್ಕಾರ ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಪ್ರಯತ್ನಪಟ್ಟು ಸಾವು ಬದುಕಿನ ಜತೆ ಹೋರಾಟ ಮಾಡುತ್ತಿರುವ ಸಂದರ್ಭ ಇವರ ಸಕಾಲಿಕ ಆಗಮನದಿಂದ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇಂತಹವರು ಸಮಾಜಕ್ಕೆ ಒಂದು ಆಸ್ತಿಯೇ ಸರಿ. ಇಂತವರಿಗೆ ಮಹಾಕರುಣಾಮಯಿ ಬುದ್ಧಪೂರ್ಣಿಮೆಯ ದಿನದಂದು ಸನ್ಮಾನಿಸಿ ಅಭಿನಂದಿಸುತ್ತಿರುವುದು ಒಂದು ಅರ್ಥಪೂರ್ಣವಾಗಿದೆ ಎಂದರು.
ನಾಯಕ ಸಮಾಜದ ಮುಖಂಡರಾದ ಕಾಳಿದಾಸನಾಯಕ, ಬಿಳಿಕೆರೆ ಗ್ರಾಮದ ಯಜಮಾನ ಪ್ರೇಮ್ ಕುಮಾರ್, ಗ್ರಾಮದ ಮುಖಂಡ ಮಧು ಚಿಕನ್, ಬಿಳಿಕೆರೆ ಸ್ವಾಮಿ, ರೈತ ಸಂಘದ ಚಿಕ್ಕಣ್ಣನಾಯಕ, ದಲಿತ ಮುಖಂಡರಾದ ನಂಜಪ್ಪ ಬಸವನಗುಡಿ, ಬಲ್ಲೇನಹಳ್ಳಿ ಕೆಂಪರಾಜು, ಸಣ್ಣಯ್ಯ, ರವಿ, ದೇವರಾಜು, ಆಟೋ ಚಂದ್ರು, ಸರ್ವೆಪುಟ್ಟರಾಜು, ರಮೇಶ್, ಜಲೇಂದ್ರ, ಕೊಮ್ಮೇಗೌಡನಕೊಪ್ಪಲು ಗ್ರಾಮದ ಗೋವಿಂದ, ಕೊಳಗಟ್ಟ ರಾಜು, ಶಿವಶಂಕರ, ವಿ.ಎಸ್.ಎಸ್.ಎನ್ ವಾಸು ಇತರರು ಹಾಜರಿದ್ದರು.