ಬೆಂಗಳೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಇಂದಿನಿಂದ ಮೂರು ದಿನ ವಲಸೆ ಕಾರ್ಮಿಕರು ತಮ್ಮ ಊರಿಗಳಿಗೆ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಈ ಆದೇಶ ಹೊರಡಿಸಿದ್ದು, ಕಾರ್ಮಿಕರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದಿದ್ದಾರೆ.
ಲಾಕ್ಡೌನ್ನಿಂದಾಗಿ ಕೆಲಸವೂ ಇಲ್ಲದೆ, ಇತ್ತ ಊರಿಗೂ ಹೋಗಲಾಗದೆ ಬೆಂಗಳೂರಿನಲ್ಲೇ ಪರದಾಡುತ್ತಿದ್ದ ಕಾರ್ಮಿಕರೀಗ ಯಾವುದೇ ಹಣ ಕೊಡದೆ ಉಚಿತವಾಗಿ ಪ್ರಯಾಣಿಸಬಹುದು. ಎಲ್ಲ ಪ್ರಯಾಣಿಕರಿಗೂ ಉಚಿತವಾಗಿ ಊಟ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ರಾತ್ರಿ ವೇಳೆ ಪ್ರಯಾಣ ಇರುವುದಿಲ್ಲ, ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಬಸ್ ಸಂಚರಿಸಲಿದ್ದು, ನಾನ್ ಸ್ಟಾಪ್ ಆಗಿರಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇದನ್ನೂ ಓದಿ ಕೆಎಸ್ಆರ್ಟಿಸಿಗೆ 1 ಕೋಟಿ ರೂ. ದೇಣಿಗೆ ಕೊಟ್ಟ ಕೆಪಿಸಿಸಿ, ಕಾರ್ಮಿಕರ ಕಷ್ಟ ಆಲಿಸಿದ ಕಾಂಗ್ರೆಸ್
ಅಗತ್ಯಬಿದ್ದರೆ ನಾಲ್ಕನೇ ದಿನವೂ ಈ ಸೌಲಭ್ಯ ಮುಂದುವರಿಯಲಿದೆ. ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಟಿಕೆಟ್ ಪಡೆದಿರುವ ಕಾರ್ಮಿಕರಿಗೆ ಹಣ ವಾಪಸ್ ಆಗಲಿದೆ ಎಂದು ಸಾರಿಗೆ ಸಚಿವರು ಅಭಯ ನೀಡಿದ್ದಾರೆ.
ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕು. ಬಸ್ ಹತ್ತುವಾಗ ನೂಕುನುಗ್ಗಲು ಮಾಡಿಕೊಳ್ಳಬಾರದು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಇದನ್ನೂ ಓದಿಕಾರ್ವಿುಕರ ಪ್ರಯಾಣ ವ್ಯವಸ್ಥೆಯೇ ಅವ್ಯವಸ್ಥೆ: ಊರಿಗೆ ತೆರಳಲು ಮೆಜೆಸ್ಟಿಕ್ಗೆ ಬಂದ ಸಾವಿರಾರು ಜನರು
ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಬಸ್ ಹತ್ತಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಹತ್ತಾರು ಬಸ್ಗಳು ಕಾರ್ಮಿಕರ ಊರುಗಳತ್ತ ಹೊರಟಿವೆ. ರಾಜ್ಯದ ಎಲ್ಲ ಜಿಲ್ಲೆಯಲ್ಲಿರುವ ಕಾರ್ಮಿಕರಿಗೂ ಅವರ ಊರಿಗೆ ತೆರಳಲು ಆಯಾ ಭಾಗದಲ್ಲಿ ಬಸ್ ಸೌಲಭ್ಯ ಮಾಡಲಾಗುತ್ತಿದ್ದು, ಇದು ರಾಜ್ಯದ ವಲಸೆ ಕಾರ್ಮಿಕರಿಗಷ್ಟೆ ಅನ್ವಯವಾಗಲಿದೆ.