ಮಂಗಳೂರು: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ನೌಕರರೊಬ್ಬರು ಕಿಡ್ನಿ ಮಾರಾಟಕ್ಕಿಟ್ಟ ಬೆನ್ನಿಗೇ ಸಂಸ್ಥೆಯ ಅಧಿಕಾರಿಗಳು ಹಾಗೂ ಅಣ್ಣನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೆಎಸ್ಆರ್ಟಿಸಿ ಸಿಬ್ಬಂದಿಯೊಬ್ಬರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಎಸ್ಆರ್ಟಿಸಿಯ ಚಾಲಕ ಕಂ ಭದ್ರತಾ ಸಿಬ್ಬಂದಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡವರು. ಮಂಗಳೂರು ಹೊರವಲಯದ ತೊಕ್ಕೊಟ್ಟು ರೈಲ್ವೇ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಡಿಪೋದ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಾಲಕೃಷ್ಣ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ. ‘ಸಂಬಂಧಪಟ್ಟ ಅಧಿಕಾರಿಗಳೇ.. ಈ ರೀತಿ ಯಾರಿಗೂ ಹಿಂಸೆ ಮಾಡಬೇಡಿ, ಸಣ್ಣಸಣ್ಣ ಮಕ್ಕಳಿರುತ್ತಾರೆ, ಅವರನ್ನು ಬಿಟ್ಟು ಹೋಗಲು ಮನಸ್ಸಾಗುವುದಿಲ್ಲ. ಆದರೂ ಸಂಸ್ಥೆ ಬಿಡುವುದಿಲ್ಲ’ ಎಂದು ಅವರು ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಇನ್ನು ‘ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಬರೆದಿರುವ ಅವರು, ತನ್ನ ಅಣ್ಣನ ಬಗ್ಗೆಯೂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ನನ್ನ ಅಂತ್ಯಸಂಸ್ಕಾರಕ್ಕೂ ಅಣ್ಣನನ್ನು ಕರೆಯಬೇಡಿ. ಆತನಿಂದ ಯಾವುದೇ ಧನಸಹಾಯ ಪಡೆಯಬಾರದು’ ಎಂದು ಕೂಡ ಅವರು ಡೆತ್ನೋಟ್ನಲ್ಲಿ ಬರೆದಿದ್ದಾರೆ.