ನರಗುಂದ: ತಾಲೂಕಿನ ಕಲಕೇರಿ ಚೆಕ್ ಪೋಸ್ಟಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸುವದರ ಜೊತೆಗೆ ಚೆಕ್ ಪೋಸ್ಟ ಮಾರ್ಗವಾಗಿ ಸಂಚರಿಸುವ ವಾ.ಕ.ರ.ಸಾ. ಸಂಸ್ಥೆಯ ಬಸ್ ಗಳನ್ನು ತಪಾಸಣೆ ನಡೆಸಿದರು.
ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ರಮ ನಗದು, ವಿವಿದ ವಸ್ತು, ಸಾಮಗ್ರಿ ಸಾಗಾಣಿಕೆಯನ್ನು ತಡೆಗಟ್ಟಲು ಚೆಕ್ ಪೋಸ್ಟ್ ತೆರೆಯಲಾಗಿದೆ. ಪ್ರತಿದಿನವೂ ನಿರಂತರವಾಗಿ ವಾಹನಗಳ ತಪಾಸಣೆ ನಡೆಸಬೇಕು ಎಂದು ಚೆಕ್ ಪೋಸ್ಟನಲ್ಲಿ ನಡೆಸಲಾಗುವ ತಪಾಸಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ದಾಖಲೆಗಳಿಲ್ಲದೆ ನಗದು, ಸಾಮಗ್ರಿ, ಚಿನ್ನಾಭರಣ, ಮಧ್ಯ ಹಾಗೂ ವಾಣಿಜ್ಯ ಸರಕುಗಳನ್ನು ವಾಹನಗಳಲ್ಲಿ ಸಾಗಾಟ ಮಾಡುವದನ್ನು ಪರಿಶೀಲಿಸಬೇಕು. ದಾಖಲೆ ರಹಿತ ಸಾಮಗ್ರಿ, ನಗದು ದೊರೆತರೆ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಚೆಕ್ ಪೋಸ್ಟನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳಿಗೆ ಸೂಚಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಚೆಕ್ ಪೋಸ್ಟನಲ್ಲಿ ಕಾರ್ಯನಿರತ ಪೋಲಿಸ್ ಅಧಿಕಾರಿ ಸಿಬ್ಬಂದಿಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಚೆಕ್ ಪೋಸ್ಟ ಮಾರ್ಗವಾಗಿ ಸಂಚರಿಸುವ ಪ್ರತಿಯೊಂದು ವಾಹನವನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಿ ದಾಖಲೆ ರಹಿತ ನಗದು, ಚಿನ್ನಾಭರಣ, ಮಧ್ಯ, ಉಡುಗೊರೆ ಸಾಮಗ್ರಿಗಳು ಕಂಡುಬಂದಲ್ಲಿ ನಿಯಮಾನುಸಾರ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಬಾಕ್ಸ್.
ಬಿಸಿಲಿನ ತಾಪದಿಂದ ಸಂರಕ್ಷಣೆ ಪಡೆಯಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು, ಕ್ಯಾಪ್ ಮೊರೆ ಹೋದರು. ತಲೆಗೆ ಟೋಪಿ, ಬಾಯಿಗೆ ಮಾಸ್ಕ್ ಹಾಕಿ ಅನೀರಿಕ್ಷಿತ ಭೇಟಿ ನೀಡಿದ್ದರಿಂದ ವಿದೇಶಿಯರಂತೆ ಕಾಣುತ್ತಿದ್ದ ಅವರನ್ನು ಕರ್ತವ್ಯನಿರತ ಅಧಿಕಾರಿಗಳು ಗುರುತಿಸಲು ಕ್ಷಣ ಕಾಲ ತಡಬಡಿಸಿದ ಘಟನೆ ಜರುಗಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ಎ.ಡಿ.ಅಮರವಾದಗಿ, ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ, ಎಸ್.ಎಲ್.ಪಾಟೀಲ, ಸಿಪಿಐ ಮಲ್ಲಯ್ಯ ಮಠಪತಿ ಸೇರಿದಂತೆ ಚೆಕ್ ಪೋಸ್ಟ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.