ಕೊಪ್ಪಳ: ಅಲ್ಪಸಖ್ಯಾತರ ವಿರೋಧಿ ನಡೆ ಅನುಸರಿಸುತ್ತಿರುವ ಬಿಜೆಪಿ ಸಂವಿಧಾನ ಬದ್ಧ ಮೀಸಲಾತಿ ಕಿತ್ತುಕೊಂಡಿದ್ದು, ರಾಹುಲ್ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಶನಿವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಅಭಿವೃದ್ಧಿ ಮರೆತು ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿಗರು ಕೇವಲ ಕೋಮು ವಿಷಯಗಳನ್ನು ಮುಂದಿಟ್ಟು ರಾಜಕೀಯ ನಡೆಸುತ್ತಿದ್ದಾರೆ. ಮತದಾರರ ಓಲೈಕೆಗಾಗಿ ಮೀಸಲಾತಿಯನ್ನು ಮನ ಬಂದಂತೆ ಹಂಚಿಕೆ ಮಾಡುತ್ತಿರುವುದು ವಿಪರ್ಯಾಸ. ಈವರೆಗೂ ಅಲ್ಪಸಂಖ್ಯಾತರಿಗೆ 2ಬಿ ಅಡಿ ಇದ್ದ ಮೀಸಲಾತಿಯನ್ನು ಕಡಿತಗೊಳಿಸುವ ಮೂಲಕ ಸಂವಿಧಾನ ಬದ್ಧ ಹಕ್ಕನ್ನು ಕಿತ್ತುಕೊಂಡಿದೆ. ಅಲ್ಲದೇ ನಮ್ಮ ನಾಯಕ ರಾಹುಲ್ ಗಾಂಧಿಯನ್ನು ನೇರವಾಗಿ ಎದುರಿಸಲಾಗದೆ ಅನರ್ಹತೆ ಅಸ್ತ್ರ ಪ್ರಯೋಗಿಸಿದೆ. ಕೈಲಾಗದವನು ಮೈ ಪರಚಿಕೊಂಡ ಎಂಬಂಥ ನಡೆ ಅನುಸರಿಸುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಜನತೆಗೆ ಬಿಜೆಪಿ ಬಂಡವಾಳ ಗೊತ್ತಾಗಿದೆ. ಮತದಾರರ ಓಲೈಕೆಗಾಗಿ ಮಾಡುತ್ತಿರುವ ಅನಾಚಾರಗಳು ಬಯಲಾಗಿವೆ. ಭಾರತ್ ಜೋಡೋ, ಕಾಂಗ್ರೆಸ್ ಸಮಾವೇಶಗಳಿಗೆ ಜನರಿಂದ ವ್ಯಕ್ತವಾಗುತ್ತಿರುವ ಸ್ಪಂದನೆಗೆ ಬಿಜೆಪಿಗರು ಹತಾಶರಾಗಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ. ಈ ಆಟಗಳು ಇನ್ನು ಮುಂದೆ ನಡೆಯುವುದಿಲ್ಲ. ಭ್ರಷ್ಟ ಬಿಜೆಪಿಯನ್ನು ಜನ ಅಧಿಕಾರದಿಂದ ಕಿತ್ತೊಗೆಯುವ ಕಾಲ ಬಂದಿದೆ. ಬರುವ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಲಿದೆ ಎಂದು ಕಿಡಿ ಕಾರಿದರು.
ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸಲೀಂ ಅಳವಂಡಿ, ನಗರ ಬ್ಲಾಕ್ ಅಧ್ಯಕ್ಷ ಎಂ.ಕಾಟನ್ ಪಾಷಾ, ಮುಖಂಡರಾದ ಕೆ.ಎಂ.ಸೈಯ್ಯದ್, ಅಕ್ಬರ್ ಪಾಷಾ, ಪ್ರಕಾಶ ಬಸರಿಗಿಡದ, ಗವಿಸಿದ್ದನಗೌಡ ಪಾಟೀಲ್, ಮಾನ್ವಿ ಪಾಷಾ, ಮುತ್ತು ಕುಷ್ಟಗಿ, ಜ್ಯೋತಿ ಗೊಂಡಬಾಳ ಇತರರಿದ್ದರು.