ಬಾಳೆಹೊನ್ನೂರು: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ (ಕೆಆರ್ಇಡಿಎಲ್) ಅಧ್ಯಕ್ಷನಾಗಿ ಬುಧವಾರ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ ತಕ್ಷಣ ನಿಗಮದ ಸಿಎಸ್ಆರ್ ನಿಧಿಯಲ್ಲಿ ಕೊಪ್ಪ ಒಳಾಂಗಣ ಕ್ರೀಡಾಂಗಣಕ್ಕೆ 1 ಕೋಟಿ ರೂ. ಅನುದಾನ ನೀಡಿ ಆದೇಶಿಸಿದ್ದೇನೆ ಎಂದು ಟಿ.ಡಿ.ರಾಜೇಗೌಡ ತಿಳಿಸಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಬಾಳೆಹೊನ್ನೂರು ಕ್ರಿಕೆಟ್ ಗೆಳೆಯರ ಬಳಗ ಗುರುವಾರ ಆಯೋಜಿಸಿದ್ದ 12ನೇ ವರ್ಷದ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಲೆದರ್ಬಾಲ್ ಕ್ರಿಕೆಟ್ ಪಂದ್ಯಾವಳಿ ಸಮಾರೋಪದಲ್ಲಿ ಮಾತನಾಡಿ, ಇಲ್ಲಿನ ಕ್ರೀಡಾಂಗಣ ಅಭಿವೃದ್ಧಿಗೆ ಎಲ್ಲರೂ ಒಮ್ಮತದ ನಿರ್ಧಾರ ಕೈಗೊಂಡಲ್ಲಿ ಒಂದು ತಿಂಗಳೊಳಗೆ ಅಭಿವೃದ್ಧಿ ಮಾಡಲಾಗುವುದು ಎಂದರು.
ಯುವಜನರು ದುಶ್ಚಟಗಳಿಂದ ದೂರವಿರಲು ಕ್ರೀಡೆಗಳು ಸಹಕಾರಿ. ಕ್ರೀಡೆಗಳ ಆಯೋಜನೆ, ಸಾಮಾಜಿಕ ಚಟುವಟಿಕೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸಕ್ರಿಯವಾಗಿರಬೇಕು ಎಂದು ಹೇಳಿದರು.
ಹಿರಿಯ ಕ್ರೀಡಾಪಟು ಒ.ಡಿ.ಸ್ಟೀನ್ ಮಾತನಾಡಿ, ಪಟ್ಟಣದಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಿಸಿಕೊಡಬೇಕು. ಜತೆಗೆ ಪಾರ್ಕ್ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಗೆಳೆಯರ ಬಳಗದ ವ್ಯವಸ್ಥಾಪಕ ಜಗದೀಶ್ ಅರಳೀಕೊಪ್ಪ ಮಾತನಾಡಿ, ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸುತ್ತಿದ್ದು, ಕ್ರೀಡಾಭಿಮಾನಿಗಳ ಸಹಕಾರ ಅಮೂಲ್ಯವಾಗಿದೆ. ದಾನಿ ಕ್ಲಿರ್ಡ್ ಲಾರೆನ್ಸ್ ಸಿಕ್ವೇರಾ ಆಶಯದಂತೆ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂದರು.
ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಕಸಾಪ ತಾಲೂಕು ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಕಾಫಿ ಬೆಳೆಗಾರ ಅನಿಲ್ ಕುಲಾಸೋ, ಎಂ.ವಿ.ಶ್ರೀನಿವಾಸ ಗೌಡ, ಗ್ರಾಪಂ ಸದಸ್ಯ ಇಬ್ರಾಹಿಂ ಶಾಫಿ, ಪ್ರಮುಖರಾದ ಎ.ಎಸ್.ಕಷ್ಣಪ್ಪ, ಎಸ್.ಎನ್.ನಾರಾಯಣ ಗೌಡ, ಸುರೇಂದ್ರ ಮಾಸ್ತರ್, ಮಂಜು ಕೋಟ್ಯಾನ್, ಪೂರ್ಣೇಶ್, ನಾಗರಾಜ್, ರಕ್ಷಿತ್ ಆಚಾರ್ಯ, ಹರೀಶ್ ಪೂಜಾರಿ, ಅಹ್ಮದ್ ಆಲಿ, ಪ್ರವೀಣ್, ಪ್ರಶಾಂತ್, ಪ್ರಭಾಕರ್ ಇತರರಿದ್ದರು.