ಸಾಗರ: ಎರಡೂವರೆ ಶತಮಾನಗಳ ಕಾಲ ಕೆಳದಿ ಸಾಮ್ರಾಜ್ಯದ ಆಳ್ವಿಕೆ ನಡೆಸಿದ ಕೆಳದಿ ಅರಸರು ವೀರಶೈವ ಲಿಂಗಾಯತ ಸಮುದಾಯದಕ್ಕೆ ಆದರ್ಶ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ಸಾಗರದ ಗೋಪಾಲ ಗೌಡ ಕ್ರೀಡಾಂಗಣದಲ್ಲಿ ಭಾನುವಾರ ತಾಲೂಕು ವೀರಶೈವ ಯುವ ವೇದಿಕೆಯಿಂದ ಆಯೋಜಿಸಿದ್ದ ಮಲೆನಾಡು ವೀರಶೈವ ಲಿಂಗಾಯತ ಕಪ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಮಲೆನಾಡಿನ ಹೆಮ್ಮೆಯ ಸಾಗರ ನಗರ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಕೆಳದಿ ಅರಸ ಸದಾಶಿವ ನಾಯಕ. ನಗರವನ್ನು ಯೋಜನಾಬದ್ಧವಾಗಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸದಾಶಿವ ನಾಯಕ ಅವರ ಹೆಸರನ್ನು ಸಾಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹಾಗೂ 25 ವರ್ಷಕ್ಕೂ ಹೆಚ್ಚು ಕಾಲ ರಾಜ್ಯಾಡಳಿತ ನಡೆಸಿದ, ಔರಂಗಜೇಬನನ್ನು ಸೋಲಿಸಿ ಶಿವಾಜಿ ಪುತ್ರ ರಾಜಾರಾಮನಿಗೆ ಆಶ್ರಯ ನೀಡಿದ ಕೆಳದಿ ರಾಣಿ ಚನ್ನಮ್ಮಾಜಿ ಹೆಸರನ್ನು ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಬೇಕು. ಇತಿಹಾಸದಲ್ಲಿ ಕೆಳದಿ ಚನ್ನಮ್ಮನಿಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂಬ ಬೇಸರ ಸಮುದಾಯಕ್ಕಿದೆ ಎಂದರು.
ವೀರಶೈವ ಯುವ ವೇದಿಕೆ ನಡೆಸಿದ ಕಾರ್ಯಕ್ರಮದಲ್ಲಿ ಈ ನಿರ್ಣಯ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಸಮುದಾಯದಿಂದ ಎರಡು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಲಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವೀರಶೈವ ಸಮುದಾಯವನ್ನು ಪ್ರತಿನಿಧಿಸಿರುವ ಕೆಳದಿ ರಾಜರ ಹೆಸರು ಚಿರಸ್ಥಾಯಿ ಆಗುವಂತಹ ನಿರ್ಣಯ ಅನುಷ್ಠಾನಕ್ಕೆ ತರಲು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ಕ್ರಿಕೇಟ್ ಪಂದ್ಯಾವಳಿಯಲ್ಲಿ ಬಸವರಾಜ ನಾಯಕ ತಂಡ (ಪ್ರಥಮ), ಭದ್ರಪ್ಪ ನಾಯಕ ತಂಡ (ದ್ವಿತೀಯ) ಬಹುಮಾನ ಪಡೆದವು. ಯುವ ವೇದಿಕೆ ಅಧ್ಯಕ್ಷ ವೀರೂಪಾಕ್ಷ ಗೌಡ, ಮೈತ್ರಿ ಪಾಟೀಲ್, ಅನಿಲ್ ಬರದವಳ್ಳಿ, ಕಲ್ಯಾಣಕುಮಾರ್, ಕೆ.ವಿ.ಪ್ರವೀಣ್, ವಸಂತಕುಮಾರ್, ಜಗದೀಶ್ ಒಡೆಯರ್, ಜಂಬಿಗೆ ವೀರಭದ್ರಪ್ಪ, ಮಲ್ಲಿಕಾರ್ಜುನ ಸ್ವಾಮಿ, ದ್ವಾರಕೇಶ್, ಸಂಜು, ದರ್ಶನ್, ಶಶಿ, ವಿವೇಕ್ ಇತರರಿದ್ದರು.