ಕೊಡಗು: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಅನೇಕ ಅನಾಹುತಗಳೇ ನಡೆದು ಹೋಗುತ್ತವೆ ಎಂದು ಲೆಕ್ಕ ಹಾಕಿರುವ ಕೊಡಗಿನ ಎಸ್ಪಿ ಜನರಿಗೆ ಹಾಗೂ ಪ್ರವಾಸಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕೊಡಗು ಎಸ್ಪಿ ಎಂ.ಎ ಅಯ್ಯಪ್ಪ ಪ್ರವಾಸಿಗರಿಗೆ ಹಾಗೂ ಜನರಿಗೆ ವಾರ್ನಿಂಗ್ ಕೊಟ್ಟಿದ್ದು ರಾತ್ರಿ ಕುಡಿದು ವಾಹನ ಚಾಲನೆ ಮಾಡಿದರೆ ಅರೆಸ್ಟ್ ಮಾಡಲಾಗುವುದು ಎಂದೇ ಹೇಳಿದ್ದಾರೆ. ಜನರು ಬೀದಿ ಬೀದಿಗಳಲ್ಲಿ ಮದ್ಯಪಾನ ಮಾಡುವುದು ಕಂಡರೆ ಮುಲಾಜಿಲ್ಲದೆ ಬಂಧನ ಮಾಡಲು ಎಸ್.ಪಿ ಆದೇಶ ನೀಡಿದ್ದಾರೆ.
ಕೊಡಗಿನಲ್ಲಿ ಎಸ್ಪಿ ಸೇರಿದಂತೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ರಾತ್ರಿ ಹೊತ್ತು ಗಸ್ತು ಹಾಕಲಿದ್ದು ಪೊಲೀಸ್ ಠಾಣೆಗಳಲ್ಲಿ ಕೇವಲ ಒಬ್ಬ ಸಿಬ್ಬಂದಿ ಮಾತ್ರವೇ ಹಾಜರು ಇರಲಿದ್ದಾರೆ. ಉಳಿದ ಎಲ್ಲಾ ಸಿಬ್ಬಂದಿಗಳು ರಾತ್ರಿ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ರವಾಸಿಗರ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿರುವ ಎಸ್.ಪಿ, ಎಂ.ಎ ಅಯ್ಯಪ್ಪ, ಎಲ್ಲಿಯೂ ಜೀವಹಾನಿಗೆ ಅವಕಾಶ ಆಗಬಾರದು ಎಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಈ ಬಗ್ಗೆ ರೆಸಾರ್ಟ್, ಹೋಂ ಸ್ಟೇ ಮಾಲಿಕರಿಗೆ ಕೂಡ ಸೂಚನೆ ನೀಡಲಾಗಿದೆ. ಅದಲ್ಲದೇ ಪ್ರವಾಸಿತಾಣಗಳಿಗೆ ಜನರು ರಾತ್ರಿ ಹೋಗುವ ಹಾಗಿಲ್ಲ ಎಂದು ಕೂಡ ಖಡಕ್ ಆಗಿ ಹೇಳಲಾಗಿದೆ.
ಕೊಡಗು- ಕೇರಳ ಗಡಿಭಾಗದಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದ್ದು ಡ್ರಗ್ಸ್ ಸಾಗಾಟ ಸಾಧ್ಯತೆ ಹಿನ್ನಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ ರೇವ್ ಪಾರ್ಟಿ ಮಾಡಿದರೆ ತಕ್ಷಣ ಕ್ರಮ ಕೈಗೊಂಡು ಸಂಬಂಧಪಟ್ಟವರ ಬಂಧನ ಮಾಡಲಾಗುವುದು ಎನ್ನಲಾಗುತ್ತಿದೆ.
ಪಾರ್ಟಿ ಹೆಸರಿನಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಸೌಂಡ್ಸ್ ಹಾಕುವ ಹಾಗಿಲ್ಲ. ಅಕ್ಕಪಕ್ಕದವರು ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಎಸ್ಪಿ ಹೇಳಿದ್ದಾರೆ.