ಬೆಂಗಳೂರು: ಕನ್ನಡ ಸಿನಿಮಾ ಕಾಂತಾರ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ. ನಿಮಗೆಲ್ಲರಿಗೂ ಗೊತ್ತೇ ಇದೆ. ಕಾಂತಾರ (Kantara) ಸಿನಿಮಾ ಸೆಪ್ಟೆಂಬರ್ ಅಂತ್ಯದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ, ಅತ್ಯದ್ಭುತ ಪ್ರತಿಕ್ರಿಯೆ ಬಂದ ಬಳಿಕ ಕೇವಲ ಎರಡೇ ವಾರದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬದಲಾಯಿತು. ಎಲ್ಲ ಭಾಷೆಗಳಲ್ಲೂ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಎಲ್ಲ ಭಾಷೆಗಳಲ್ಲೂ ಕಾಂತಾರ ಬ್ಲಾಕ್ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಕೇವಲ 15 ಕೋಟಿ ರೂ. ಬಜೆಟ್ನಲ್ಲಿ ಸಿದ್ಧವಾದ ಸಿನಿಮಾ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಸಿನಿಮಾದಲ್ಲಿ ರಿಷಭ್ (Rishab Shetty) ಅವರ ಅಮೋಘ ಅಭಿನಯವೇ ಪ್ರಮುಖ ಆಕರ್ಷಣೆ. ಅದರಲ್ಲೂ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ನಲ್ಲಿ ರಿಷಭ್ ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ರೀತಿಯಂತೂ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇಡೀ ಚಿತ್ರವನ್ನು ಎಲ್ಲ ಭಾಷಿಗರು ತಮ್ಮದೆಂದು ಅಪ್ಪಿ, ಒಪ್ಪಿಕೊಂಡರು. ಸಿನಿಮಾ ನೋಡಿದ ಬಳಿಕ ಸೂಪರ್ ಸ್ಟಾರ್ ರಜಿನಿಕಾಂತ್ ಸಹ ರಿಷಭ್ ನಟನೆ ಫಿದಾ ಆಗಿ, ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಚಿನ್ನದ ಸರವನ್ನು ಉಡುಗೊರೆಯಾಗಿಯು ನೀಡಿದ್ದಾರೆ. ಅಂದಹಾಗೆ ಕಾಂತಾಂರ ಸಿನಿಮಾವನ್ನು ಒಂದು ಕೋಟಿಗೂ ಅಧಿಕ ಮಂದಿ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿರುವುದು ಹೊಸ ದಾಖಲೆಯಾಗಿದೆ. ಜನರ ಮಾತಿನ ಪ್ರಚಾರವೇ ಕಾಂತಾರದ ಪ್ರಚಂಡ ಯಶಸ್ಸಿಗೆ ಕಾರಣ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ.
ಅಂದಹಾಗೆ ಕಾಂತಾರಾ ಸಿನಿಮಾದ ಈ ಪರಿ ಯಶಸ್ಸಿಗೆ ಮಲಯಾಳಿ ತಂಡವೊಂದರ ಕೊಡುಗೆಯು ಇದೆ. ಅದು ಹೇಗೆಂದರೆ, ಕಾಂತಾರ ಸಿನಿಮಾ ತಾಂತ್ರಿಕವಾಗಿಯೂ ತುಂಬಾ ಸದ್ದು ಮಾಡಿತು. ಅದರಲ್ಲೂ ವಿಎಫ್ಎಕ್ಸ್ ಪ್ರಮುಖ ಪಾತ್ರ ವಹಿಸಿತು. ಚಿತ್ರ ನೋಡಿದವರಂತೂ ವಿಎಫ್ಎಕ್ಸ್ ಬಗ್ಗೆ ಹೆಚ್ಚು ಮಾತನಾಡಿದರು. ಅಷ್ಟರ ಮಟ್ಟಿಗೆ ವಿಎಫ್ಎಕ್ಸ್ ನೈಜವಾಗಿ ಮೂಡಿಬಂದಿದೆ. ವಿಎಫ್ಎಕ್ಸ್ ಜವಾಬ್ದಾರಿಯನ್ನು ಲವಕುಶ ತಂಡ ಹೊತ್ತುಕೊಂಡಿತ್ತು. ಇದೇ ತಂಡ ಮಲಯಾಳಂ, ತಮಿಳು ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಲವ ಕುಶ ಮುಂದಿನ ಪ್ರಾಜೆಕ್ಟ್ ಕೂಡ ಬಿಗ್ ಬಜೆಟ್ ಸಿನಿಮಾ ಆಗಿದೆ. ವಿ ಸಿನಿಮಾಸ್ ಬ್ಯಾನರ್ನಡಿಯಲ್ಲಿ ಮ್ಯಾಥ್ಯೂ ಮತ್ತು ನಸ್ಲೀನ್ ನಟಿಸಿರುವ ‘ನೇಮರ್’ ಚಿತ್ರವು ಸವಾಲಿನ ಚಿತ್ರವಾಗಿದ್ದು, ತಾವು ಕಾತುರದಿಂದ ಎದುರು ನೋಡುತ್ತಿದ್ದೇವೆ ಎಂದು ಚಿತ್ರತಂಡ ಹೇಳುತ್ತದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ‘ನೇಮರ್’ ಅನ್ನು ಸುಧಿ ಮ್ಯಾಡಿಸನ್ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರದ ಮೋಷನ್ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಹೊರಬಿದ್ದಿದೆ. ಚಿತ್ರದ ಶೂಟಿಂಗ್ ಪಾಂಡಿಚೇರಿ, ಕೊಯಮತ್ತೂರು ಮತ್ತು ಚಾಲಕುಡಿಯಲ್ಲಿ ಚಿತ್ರೀಕರಣಗೊಂಡಿದೆ. ‘ನೇಮರ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಮಾರ್ಚ್ನಲ್ಲಿ ಚಿತ್ರ ಥಿಯೇಟರ್ಗೆ ಬರಲಿದೆ. ಈ ಬಗ್ಗೆ ಲವಕುಶ ಸಂದರ್ಶನವೊಂದರಲ್ಲಿ ವಿವರಗಳನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)
ಕಾಂತಾರ ಮತ್ತು ರಿಷಭ್ ಶೆಟ್ಟಿ ಬಗ್ಗೆ ನಟಿ ಅನಸೂಯ ಭಾರದ್ವಜ್ ಮಾಡಿದ ಕಾಮೆಂಟ್ ವೈರಲ್!
ರಿಷಭ್ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್ ಸಿದ್ದಿಖಿ ಆಡಿದ ಮಾತುಗಳಿವು…