ಲಖನೌ: ಇತ್ತಿಚಿನ ವರ್ಷಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಸರ್ವೆ ಸಾಮಾನ್ಯವಾಗಿದ್ದು, ಫೋಟೋ ಸಲುವಾಗಿ ತಾಳಿ ಕಟ್ಟುವ ಮುನ್ನ ಅಥವಾ ನಂತರ ವರ ವಧುವಿನ ಹಣೆಗೆ ಮುತ್ತಿಡುವುದನ್ನು ನಾವು ನೋಡಿರುತ್ತೇವೆ. ಆದರೆ, ಇಲ್ಲೊಂದು ಕಡೆ ವರ ವಧುವಿನ ಹಣೆಗೆ ಮುತ್ತಿಟ್ಟ ಎಂಬ ಕಾರಣಕ್ಕೆ ಮದುವೆ ಮನೆ ರಣಾಂಗಣವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯು ಉತ್ತರಪ್ರದೇಶದ ಹಾಪುರ್ ಜಿಲ್ಲೆಯ ಅಶೋಕ್ನಗರದಲ್ಲಿ ಈ ಘಟನೆ ನಡೆದಿದ್ದು, ನವ ವಧು-ವರ ಹರ ಬದಲಾಯಿಸಿಕೊಳ್ಳುವ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಎರಡು ಕಡೆಯವರು ಗಂಭೀರವಾಗಿ ಗಾಯಗೊಂಡಿದ್ದು, ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಾಪುರ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ರಾಜ್ಕುಮಾರ್ ಅಗರ್ವಾಲ್, ವಧುವಿನ ತಂದೆ ತನ್ನ ಇಬ್ಬರ ಮಕ್ಕಳ ಮದುವೆಯನ್ನು ಒಂದೇ ಮಂಟಪದಲ್ಲಿ ಏರ್ಪಡಿಸಿದ್ದರು. ಮೊದಲ ಮದುವೆ ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಂಡಿದೆ. ಎರಡನೇ ಮಗಳ ಮದುವೆ ಸಮಾರಂಭದ ವೇಳೆ ವಧು-ವರ ಹಾರ ಬದಲಾಯಿಸಿಕೊಳ್ಳುವ ವೇಳೆ ಮದುವೆ ಗಂಡು ಮಧುಮಗಳಿಗೆ ಚುಂಬಿಸಿದ್ದಾನೆ.
ಇದನ್ನೂ ಓದಿ: ನನ್ನ ತಾಳ್ಮೆ ಪರೀಕ್ಷಿಸಬೇಡ ಎಲ್ಲಿದ್ದರೂ ತಕ್ಷಣವೇ ಹಿಂದಿರುಗಿ ಬಾ; ಪ್ರಜ್ವಲ್ಗೆ ಎಚ್ಚರಿಕೆ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಇದನ್ನು ಕಂಡು ಸಿಟ್ಟಿಗೆದ್ದ ವಧುವಿನ ಕುಟುಂಬಸ್ಥರು ಆತ ಬಲವಂತವಾಗಿ ನಮ್ಮ ಮಗಳಿಗೆ ಚುಂಬಿಸಿದ್ದಾನೆ ಎಂದು ಆರೋಪಿಸಿ ವರನ ಕಡೆಯವರ ಜೊತೆ ಜಗಳವಾಡಲು ಶುರು ಮಾಡಿದ್ದಾರೆ. ಇದಾದ ಕೆಲ ಕ್ಷಣದ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ವಧುವಿನ ಕಡೆಯವರು ವರನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆಯಲ್ಲಿ ವರ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರಿನ ಸ್ವೀಕೃತಿಯ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ಸಾರ್ವಜನಿಕ ಶಾಂತಿ ಕದಡುವ ಆರೋಪದಡಿ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಾಪುರ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ರಾಜ್ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.