ಬೆಂಗಳೂರು: ಈತ ಎಂಬಿಎ ಪದವೀಧರ, ಅಕೌಂಟ್ನಲ್ಲಿತ್ತು 20 ಲಕ್ಷ ರೂಪಾಯಿ. ಆದರೂ 150 ರೂ. ಕೂಲಿಯ ಕೆಲಸ ಮಾಡಬೇಕಾದ ಪರಿಸ್ಥಿತಿ. ಅಷ್ಟಕ್ಕೂ ಈತನಿಗೆ ಈ ಪರಿಸ್ಥಿತಿ ಬರಲು ಕಾರಣ ಸ್ವಯಂಕೃತ ಅಪರಾಧ.
ಹೀಗೆ ಎಂಬಿಎ ಓದಿ, ಕೂಲಿ ಕೆಲಸ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ಡಬಲ್ ಗ್ರಾಜುವೇಟ್ ಹೆಸರು ಅರ್ಪಿತ್. ಈತ ತನ್ನ ಪ್ರೇಯಸಿ ಆಕಾಂಕ್ಷ ಎಂಬಾಕೆಯನ್ನು ಕೊಲೆ ಮಾಡಿದ್ದರಿಂದಲೇ ಇಷ್ಟೆಲ್ಲ ಅನುಭವಿಸುವಂತಾಗಿತ್ತು.
ಆಕೆಯನ್ನು ಉಸಿರುಗಟ್ಟಿಸಿಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ಸೋತು, ಹೆದರಿ ಬೆಂಗಳೂರು ಬಿಟ್ಟಿದ್ದ ಈ ಕೊಲೆಗಾರ ಪ್ರಿಯಕರ ಕೊನೆಗೂ ಕೊಲೆ ನಡೆದ ಒಂದು ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ನೀವು ನನಗಾಗಿ ಕಾದಿದ್ದೀರಿ, ನಾನು ನಿಮ್ಮ ಭೇಟಿಗಾಗಿ ಕಾಯುತ್ತಿರುತ್ತೇನೆ: ಎಲ್ಲರಿಗೂ ನಿರ್ದೇಶಕ ರಿಷಬ್ ಶೆಟ್ಟಿ ಆಹ್ವಾನ
ಪ್ರಕರಣದ ಪೂರ್ತಿ ವಿವರ ಇಂತಿದೆ..
ಆಂಧ್ರಪ್ರದೇಶ ಮೂಲದ ಅರ್ಪಿತ್ ಗುರಿಜಾಲ (28) ಜೂನ್ 5ರಂದು ಹೈದರಾಬಾದ್ ಮೂಲದ ಆಕಾಂಕ್ಷಾ (23) ಎಂಬಾಕೆಯನ್ನು ಆಕೆಯ ಫ್ಲ್ಯಾಟ್ನಲ್ಲೇ ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಆತ್ಮಹತ್ಯೆ ಕಥೆ ಕಟ್ಟಲು ಯತ್ನಿಸಿ ವಿಫಲಗೊಂಡು ಪರಾರಿಯಾಗಿದ್ದ. ಕಳೆದ ಒಂದು ತಿಂಗಳಿಂದ ಆರೋಪಿ ವಿಜಯವಾಡ, ಅಸ್ಸಾಂ ಭಾಗದಲ್ಲಿ ಸುತ್ತಾಡಿ, ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈ ಆರೋಪಿಯನ್ನು ಜೀವನ್ಬಿಮಾನಗರ ಪೊಲೀಸರು ಬಂಧಿಸಿದ್ದಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಅರ್ಪಿತ್ ಎಂಬಿಎ ವ್ಯಾಸಂಗ ಮಾಡಿದ್ದು, ಆಕಾಂಕ್ಷಾ ಬಿ.ಕಾಂ ಪದವೀಧರೆ. ಎರಡು ವರ್ಷಗಳ ಹಿಂದೆ ಇಬ್ಬರೂ ಬೆಂಗಳೂರಿಗೆ ಬಂದಿದ್ದು, ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಸ್ಪರ ಪರಿಚಯವಾಗಿದ್ದು, ಕೆಲ ದಿನಗಳ ಬಳಿಕ ಪ್ರೇಮಾಂಕುರವಾಗಿತ್ತು. ಆ ಬಳಿಕ ಇಬ್ಬರು ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಅರ್ಪಿತ್ಗೆ ಹೈದರಾಬಾದ್ನಲ್ಲಿ ಕೆಲಸ ಸಿಕ್ಕಿದ್ದು, ಅಲ್ಲಿಯೇ ವಾಸವಾಗಿದ್ದಾನೆ. ಇನ್ನು ಆಕಾಂಕ್ಷಾ ಕೋಡಿಹಳ್ಳಿಯ 6ನೇ ಕ್ರಾಸ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸ್ನೇಹಿತೆ ಜತೆ ವಾಸವಾಗಿದ್ದಳು.
ಲವ್ ಬ್ರೇಕಪ್ ಮತ್ತೊಬ್ಬನ ಜತೆ ಡೇಟಿಂಗ್
ಈ ಮಧ್ಯೆ ಆಕಾಂಕ್ಷಾ ಮತ್ತೊಬ್ಬ ಯುವಕನ ಜತೆ ಡೇಟಿಂಗ್ ನಡೆಸುತ್ತಿದ್ದಳು. ಈ ವಿಚಾರ ತಿಳಿದ ಅರ್ಪಿತ್, ಪ್ರೇಯಸಿಯನ್ನು ಪ್ರಶ್ನಿಸಿದ್ದಾನೆ. ಅಲ್ಲದೆ, ಅದನ್ನು ಬ್ರೇಕಪ್ ಮಾಡಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದಾನೆ. ಆದರೂ ಆಕೆ, ಹೊಸ ಪ್ರಿಯಕರನ ಜತೆ ಮಾಲ್ ಸೇರಿ ಎಲ್ಲೆಡೆ ಸುತ್ತಾಡುತ್ತ ಡೇಟಿಂಗ್ ಮುಂದುವರಿಸಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಅರ್ಪಿತ್, ಪ್ರೇಯಸಿಗೆ ಕರೆ ಮಾಡಿ ಜಗಳ ಮಾಡಿದ್ದ. ಈ ವೇಳೆಯೇ ಆಕಾಂಕ್ಷಾಗೆ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತಮ್ಮನನ್ನು ಉಳಿಸಲು ಹೋದ ಅಕ್ಕ, ಅವರಿಬ್ಬರನ್ನು ರಕ್ಷಿಸಲು ಹೋದ ಅಮ್ಮ: ಕೊನೆಗೆ ಮೂವರೂ ಬದುಕಲಿಲ್ಲ!; ಆಗಿದ್ದೇನು?
ನಿನ್ನನ್ನು ಕೊನೆಯ ಬಾರಿ ನೋಡಬೇಕು
ಈ ಮಧ್ಯೆ ಜೂನ್ 3ರಂದು ಕರೆ ಮಾಡಿದ್ದ ಆರೋಪಿ, ನೀನು ಯಾರೊಂದಿಗಾದರೂ ಡೇಟಿಂಗ್ ಮಾಡಿಕೊ, ನನಗೇನೂ ಸಮಸ್ಯೆಯಿಲ್ಲ. ಆದರೆ ಕೊನೆಗೆ ಬಾರಿ ನಿನ್ನನ್ನು ನೋಡಲು ಭೇಟಿ ಆಗುತ್ತೇನೆ ಎಂದು ಹೇಳಿ, ಜೂ.4ರಂದೇ ಬೆಂಗಳೂರಿಗೆ ಬಂದಿದ್ದಾನೆ. ಜೂನ್ 5ರಂದು ಇಬ್ಬರೂ ಒಟ್ಟಿಗೆ ಹೊರಗಡೆ ಸುತ್ತಾಡಿ, ಮಧ್ಯಾಹ್ನ ಮನೆಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಸ್ವಲ್ಪ ಮದ್ಯ ಸೇವಿಸಿದ್ದ ಅರ್ಪಿತ್, ಪ್ರೇಯಸಿಗೆ ಮತ್ತೊಮ್ಮೆ ಡೇಟಿಂಗ್ ವಿಚಾರವಾಗಿ ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ಆಕಾಂಕ್ಷಾಳ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು, ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ನೇಣು ಬಿಗಿದುಕೊಂಡಿರುವ ರೀತಿಯಲ್ಲಿ ಬಿಂಬಿಸಲು ಯತ್ನಿಸಿದ್ದಾನೆ. ಅದು ಸಾಧ್ಯವಾಗದೆ, ನೆಲದ ಮೇಲೆಯೇ ಮೃತದೇಹ ಇಟ್ಟು ಪರಾರಿಯಾಗಿದ್ದ. ಸಂಜೆ 7 ಗಂಟೆ ಸುಮಾರಿಗೆ ಆಕಾಂಕ್ಷಾಳ ಸ್ನೇಹಿತೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಿಬ್ಬರ ಪ್ರಾಣ ಉಳಿಸಿ ಸಾವಿಗೀಡಾದ ತಾಯಿ!; ಆಗಿದ್ದೇನು?
ವೈಟ್ಫೀಲ್ಡ್ಗೆ ಬಂದು ಲಾಕ್ ಆದ
ಕೃತ್ಯ ಎಸಗಿದ ಬಳಿಕ ಆರೋಪಿ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತನ್ನ ಕಚೇರಿಯ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಸ್ಥಳದಲ್ಲಿಯೇ ಬಿಟ್ಟು ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಿದ್ದ. ಮಾರ್ಗ ಮಧ್ಯೆಯೇ ಭೂಪಾಲ್ನಲ್ಲಿ ಇಳಿದುಕೊಂಡು ಅಸ್ಸಾಂಗೆ ಪರಾರಿಯಾಗಿದ್ದ. ಆರೋಪಿಯ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಹೀಗಾಗಿ ಖಾತೆಯಲ್ಲಿ 20 ಲಕ್ಷ ರೂ. ಇದ್ದರೂ ಅದನ್ನು ಡ್ರಾ ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಿಸಿದ್ದ. ಕೈಯಲ್ಲಿದ್ದ ಬರೀ 5 ಸಾವಿರ ರೂಪಾಯಿಯೊಂದಿಗೆ ಬೆಂಗಳೂರು ಬಿಟ್ಟಿದ್ದ ಈತ ಅಸ್ಸಾಂನಲ್ಲಿ ಸೇಲ್ಸ್ಮ್ಯಾನ್, ಹೋಟೆಲ್ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲಿ ದಿನಕ್ಕೆ 150 ರೂ. ಸಂಬಳಕ್ಕೆ ಕೆಲಸ ಮಾಡಿ, ಕೊನೆಗೆ ಆರ್ಥಿಕ ಮುಗ್ಗಟ್ಟಿನಿಂದ ಬೇಸರಗೊಂಡಿದ್ದ ಆರೋಪಿ, ವಿಜಯವಾಡದ ಸಂಬಂಧಿಯೊಬ್ಬರ ಜತೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿತ್ತು. ಹಣಕ್ಕಾಗಿ ಆರೋಪಿ ಅವರನ್ನು ಸಂಪರ್ಕಿಸಿದ್ದ. ನಂತರ ಆ ವ್ಯಕ್ತಿಯ ಮೊಬೈಲ್ಫೋನ್ ನೆಟ್ವರ್ಕ್ ಪರಿಶೀಲಿಸಿದಾಗ ಆರೋಪಿ ಹೊಸ ನಂಬರ್ನಿಂದ ಕರೆ ಮಾಡಿರುವುದು ಪತ್ತೆಯಾಗಿತ್ತು. ಕೆಲ ದಿನಗಳ ಹಿಂದೆ ಆರೋಪಿ ವೈಟ್ಫೀಲ್ಡ್ ಭಾಗದ ಕಡೆ ಬಂದಿರುವ ಮಾಹಿತಿ ಲಭಿಸಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಸ್ತ್ರೀ ಜತೆ ಅಪ್ಪನ ದೈಹಿಕ ಸಂಪರ್ಕದ ವಿಡಿಯೋ ವೈರಲ್; ಮನನೊಂದ ಮಗ ಪ್ರಾಣ ಕಳ್ಕೊಂಡ!