ಬೆಂಗಳೂರು: ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದ್ದು, ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ.
ಭಾನುವಾರ ಮಧ್ಯರಾತ್ರಿ 1.30ರ ಸುಮಾರಿಗೆ ಖರ್ಗೆ ಅವರ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಅಪರಿಚಿತರು ಕರೆ ಮಾಡಿದ್ದಾರೆ. ಖರ್ಗೆ ಅವರೇ ಕರೆ ಸ್ವೀಕರಿಸಿದಾಗ ಹಿಂದಿ-ಇಂಗ್ಲಿಷ್ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಸ್ತಾಪ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಪ್ರಿಯಾಂಕ್ ಖರ್ಗೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ ನಾಮಪತ್ರದ ಜತೆ ಸಲ್ಲಿಸಲು 10 ಸಾವಿರ ರೂ. ಯಾರು ಕೊಡ್ತೀರಿ ಎಂದು ಕೇಳಿದ ಖರ್ಗೆ!
‘‘ಅದೇ ದಿನ ರಾತ್ರಿ 12.36ರಿಂದ 12.53ರ ತನಕ ಅಪರಿಚಿತ ಸಂಖ್ಯೆಯಿಂದ ನನಗೂ 10 ಬಾರಿ ಕರೆ ಬಂದಿದ್ದು, ಸ್ವೀಕರಿಸಿರಲಿಲ್ಲ. ಆದರೆ ಮಧ್ಯರಾತ್ರಿ 1 ಗಂಟೆಗೆ ಕರೆ ಬಂದಾಗ ಸ್ವೀಕರಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ’’ ಎಂದು ಪ್ರಿಯಾಂಕ್ ವಿವರಿಸಿದ್ದಾರೆ.
ಕರೆ ಮಾಡಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಪ್ರಿಯಾಂಕ್ ಖರ್ಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ಸೂದ್ ಅವರಲ್ಲಿ ಮನವಿ ಮಾಡಿದ್ದಾರೆ.